ಉತ್ತರ ಪ್ರದೇಶದಲ್ಲಿಯೂ ಗಂಗಾ ನದಿಯಲ್ಲಿ ತೇಲಿ ಬರುತ್ತಿವೆ ಮೃತದೇಹಗಳು

ಬಿಹಾರದ ಬಕ್ಸರ್‌ನಲ್ಲಿ ಗಂಗಾ ನದಿಯಲ್ಲಿ ನೂರಾರು ಹೆಣಗಳು ಪತ್ತೆಯಾದ ಮರುದಿನವೇ ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಕೂಡ ಹತ್ತಾರು ಮೃತದೇಹಗಳು ಸಿಕ್ಕಿವೆ. ಇದು ಕೋವಿಡ್‌ನಿಂದ ಮೃತಪಟ್ಟವರ ದೇಹ ಎಂಬ ಅನುಮಾನ ವ್ಯಕ್ತವಾಗಿದ್ದು, ಸೋಂಕು ಹರಡುವ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ.

ಉತ್ತರ ಪ್ರದೇಶದಲ್ಲಿಯೂ ಗಂಗಾ ನದಿಯಲ್ಲಿ ತೇಲಿ ಬರುತ್ತಿವೆ ಮೃತದೇಹಗಳು
Linkup
ಲಕ್ನೋ: ಕೊರೊನಾ ವೈರಸ್‌ನಿಂದ ಮೃತಪಟ್ಟವರ ಶವಗಳು ಗಂಗಾನದಿಯಲ್ಲಿ ತೇಲಿ ಬರುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿಯೂ ವರದಿಯಾಗಿದೆ. ಬಿಹಾರದ ಬಕ್ಸರ್‌ನಲ್ಲಿನ ನದಿಮೂಲದ 55 ಕಿಮೀ ದೂರದಲ್ಲಿ ಸೋಮವಾರ ನೂರಾರು ಮೃತದೇಹಗಳು ಪತ್ತೆಯಾಗಿದ್ದವು. ಇದು ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ರಾಜ್ಯದಲ್ಲಿ ಮೃತದೇಹಗಳನ್ನು ನೀರಿಗೆ ಎಸೆಯುವ ಪದ್ಧತಿ ಇಲ್ಲ. ಹೀಗಾಗಿ ಇವು ಉತ್ತರ ಪ್ರದೇಶದಿಂದ ತೇಲಿ ಬಂದ ಮೃತದೇಹಗಳಾಗಿವೆ ಎಂದು ಬಿಹಾರದ ಅಧಿಕಾರಿಗಳು ವಾದಿಸಿದ್ದರು. ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ವೇಗವಾಗಿ ಹರಡುತ್ತಿರುವುದರಿಂದ ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ಮೃತದೇಹಗಳು ಕೋವಿಡ್ ಸೋಂಕಿತರದ್ದೇ ಇರಬಹುದು ಎಂದು ಶಂಕಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿನ ಚಿತಾಗಾರಗಳಲ್ಲಿನ ಗೈರುಹಾಜರಿಯಲ್ಲಿ ಸ್ಥಳೀಯರು ಸೋಂಕು ಹರಡುವ ಭೀತಿಗೆ ಒಳಗಾಗುತ್ತಿದ್ದಾರೆ. ಹಾಗೆಯೇ ಮೃತದೇಹಗಳನ್ನು ನೀರಿಗೆ ಎಸೆಯುವಂತೆ ಕುಟುಂಬದವರ ಮೇಲೆ ಒತ್ತಡ ಹೇರುತ್ತಿದ್ದಾರೆ. 'ನದಿಯಲ್ಲಿ ಮೃತದೇಹಗಳು ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ ಮತ್ತು ತನಿಖೆ ಆರಂಭವಾಗಿದೆ. ಅವು ಎಲ್ಲಿಂದ ಬಂದಿವೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ' ಎಂದು ಘಾಜಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂಪಿ ಸಿಂಗ್ ಹೇಳಿದ್ದಾರೆ. 'ನಾವು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ ಇದುವರೆಗೂ ಅವರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ನಮಗೆಲ್ಲರಿಗೂ ವೈರಸ್ ಹರಡುವ ಭಯ ಉಂಟಾಗಿದೆ' ಎಂದು ಸ್ಥಳೀಯರಾದ ಅಖಂಡ್ ಆತಂಕ ವ್ಯಕ್ತಪಡಿಸಿದರು. ಬಕ್ಸರ್ ಘಟನೆಯನ್ನು ಉಲ್ಲೇಖಿಸಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಸಂಬಂಧಿತ ರಾಜ್ಯಗಳು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಮಂಗಳವಾರ ಬಿಹಾರದ ಬಕ್ಸರ್‌ನ ಗಂಗಾ ನದಿಯ ದಡದಲ್ಲಿ ಕೊಳೆಯುವ ಹಂತದಲ್ಲಿದ್ದ ನೂರಾರು ಶವಗಳು ಪತ್ತೆಯಾಗಿದ್ದವು. ಹಾಗೆಯೇ ಹತ್ತಾರು ದೇಹಗಳು ಬಿಹಾರ-ಉತ್ತರ ಪ್ರದೇಶ ಗಡಿ ಭಾಗದ ಚೌಸಾ ಪಟ್ಟಣದಲ್ಲಿ ಸಿಕ್ಕಿದ್ದವು. ಇವು ಕೋವಿಡ್‌ನಿಂದ ಮೃತಪಟ್ಟವರ ದೇಹಗಳಾಗಿದ್ದು, ಇದರಿಂದ ವೈರಸ್ ಹರಡುವ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ. ಐದಾರು ದಿನಗಳ ಹಿಂದೆ ಈ ದೇಹಗಳನ್ನು ನೀರಿಗೆ ಎಸೆದಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ಈ ಘಟನೆ ಮತ್ತು ಬಿಹಾರಗಳ ನಡುವೆ ಪರಸ್ಪರ ದೋಷಾರೋಪಣೆಗೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಅಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿರುವುದಕ್ಕೆ ಪುರಾವೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.