ಐಆರ್‌ಎಸ್‌ಡಿಸಿ ರದ್ದುಗೊಳಿಸಿದ ಕೇಂದ್ರ ಸರ್ಕಾರ: ರೈಲ್ವೆ ನಿಲ್ದಾಣಗಳ ಗತಿ ಏನಾಗಲಿದೆ?

ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಹಾಗೂ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದ್ದ ಐಆರ್‌ಎಸ್‌ಡಿಸಿ ನಿಗಮವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಹಠಾತ್ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ನಗರ ರೈಲ್ವೆ ನಿಲ್ದಾಣಗಳ ನಿರ್ವಹಣೆಗೆ ಹೊಡೆತ ಬೀಳುವ ಕಳವಳ ಎದುರಾಗಿದೆ.

ಐಆರ್‌ಎಸ್‌ಡಿಸಿ ರದ್ದುಗೊಳಿಸಿದ ಕೇಂದ್ರ ಸರ್ಕಾರ: ರೈಲ್ವೆ ನಿಲ್ದಾಣಗಳ ಗತಿ ಏನಾಗಲಿದೆ?
Linkup
ಬೆಂಗಳೂರು: ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಮತ್ತು ಪುನರುಜ್ಜೀವನ ನಿರ್ವಹಣಾ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ () ವನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ರೈಲ್ವೆ ನಿಲ್ದಾಣಗಳ ನಿರ್ವಹಣೆಗೆ ಭಾರಿ ಹೊಡೆತ ನೀಡುವ ಭೀತಿ ಎದುರಾಗಿದೆ. ಮರು ಅಭಿವೃದ್ಧಿಗಾಗಿ 2012ರಲ್ಲಿ ಐಆರ್‌ಎಸ್‌ಡಿಸಿಯನ್ನು ಸ್ಥಾಪಿಸಲಾಗಿತ್ತು. ಆದರೆ ಇದನ್ನು ರದ್ದುಗೊಳಿಸುವುದಾಗಿ ಸೋಮವಾರ ಪ್ರಕಟಿಸಿದೆ. ಐಆರ್‌ಎಸ್‌ಡಿಸಿ ನಿರ್ವಹಣೆ ಮಾಡುತ್ತಿದ್ದ ಎಲ್ಲ ನಿಲ್ದಾಣಗಳನ್ನೂ ಸಂಬಂಧಿ ವಿಭಾಗೀಯ ರೈಲ್ವೆಗಳಿಗೆ ಹಸ್ತಾಂತರಿಸಲಾಗುವುದು. ಮುಂದಿನ ನಿಲ್ದಾಣ ಅಭಿವೃದ್ಧಿ ಯೋಜನೆಗಳನ್ನು ವಿಭಾಗೀಯ ರೈಲ್ವೇಸ್ ನೋಡಿಕೊಳ್ಳಲಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿತ್ತು. ಐಆರ್‌ಎಸ್‌ಡಿಸಿ ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣವನ್ನು 2019ರ ಫೆಬ್ರವರಿಯಿಂದ ನಿರ್ವಹಣೆ ಮಾಡುತ್ತಿತ್ತು. ನೈಋತ್ಯ ರೈಲ್ವೆಯ (ಎಸ್‌ಡಬ್ಲ್ಯೂಆರ್) ಅಡಿಯಲ್ಲಿರುವ ಯಶವಂತಪುರ, ಕೆಆರ್ ಪುರಂ ಮತ್ತು ಬಂಗಾರಪೇಟೆ ರೈಲ್ವೆ ನಿಲ್ದಾಣಗಳು ಸೇರಿದಂತೆ ಮತ್ತಷ್ಟು ನಿಲ್ದಾಣಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ನಿರ್ವಹಣೆ ಮಾಡಲು ಅದು ಯೋಜಿಸಿತ್ತು. ಐಆರ್‌ಎಸ್‌ಡಿಸಿ ಬೆಂಗಳೂರು ನಗರ ಕೆಎಸ್‌ಆರ್ ನಿಲ್ದಾಣವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡ ಬಳಿಕ ಅಲ್ಲಿನ ಸ್ವಚ್ಛತೆ ಗಣನೀಯವಾಗಿ ಸುಧಾರಿಸಿತ್ತು ಎಂದು ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಅದು ಸವಲತ್ತು ನಿರ್ವಹಣಾ ಸೇವೆಗಳಿಗಾಗಿ ಬ್ರಿಟನ್ ಮೂಲದ ನೈಟ್ ಫ್ರಾಂಕ್ ಅನ್ನು ತಂದಿತ್ತು. ಕಳೆದ ಎರಡು ವರ್ಷಗಳಿಂದ ರೈಲ್ವೆ ನಿಲ್ದಾಣದಲ್ಲಿ ಅನೇಕ ಬ್ರಾಂಡೆಡ್ ಸಂಸ್ಥೆಗಳು, ಆಹಾರ ಮಳಿಗೆಗಳು ಆರಂಭವಾಗಿದ್ದವು. ನಗರ ರೈಲ್ವೆ ನಿಲ್ದಾಣದ ಸ್ವಚ್ಛತೆಯು ಕಣ್ಣಿಗೆ ಕಾಣುವಂತಿದೆ. ಅವರು ಇನ್ನಷ್ಟು ಬ್ರಾಂಡೆಡ್ ಹಾಗೂ ಆರೋಗ್ಯಕರ ಆಹಾರ ಮಳಿಗೆಗಳನ್ನು ಕರೆತಂದಿದ್ದರು. ಆದರೆ ಇನ್ನು ಹಳೆಯ ವ್ಯವಸ್ಥೆಗೆ ಮರಳುವುದು ಪ್ರಯಾಣಿಕರಿಗೆ ಎಷ್ಟು ಅನುಕೂಲವಾಗುತ್ತದೆಯೋ ಗೊತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ನಗರ ರೈಲ್ವೆ ನಿಲ್ದಾಣದಲ್ಲಿ ಐಆರ್‌ಎಸ್‌ಡಿಸಿ 12 ಅಡಿಯ ಸುರಂಗ ಅಕ್ವೇರಿಯಂ ಅನ್ನು ಅಳವಡಿಸಿತ್ತು. ಇದು ದೇಶದಲ್ಲಿಯೇ ರೈಲ್ವೆ ನಿಲ್ದಾಣವೊಂದರಲ್ಲಿ ಅಳವಡಿಸಿದ ಅಂತಹ ಮೊದಲ ಸೌಲಭ್ಯವಾಗಿತ್ತು. ಪ್ರಯಾಣಿಕರಿಗೆ ಜನರಿಕ್ ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರುವ ದವಾ ದೋಸ್ತ್ ಎಂಬ ಔಷಧ ಅಂಗಡಿಯನ್ನು ಕೂಡ ಆರಂಭಿಸಲಾಗಿತ್ತು. ನಾಲ್ಕು ಚಕ್ರದ ವಾಹನಗಳಿಗೆ 25 ರೂ ಮತ್ತು ದ್ವಿಚಕ್ರ ವಾಹನಗಳಿಗೆ 15 ರೂಪಾಯಿ ಮೊದಲ ಎರಡು ಗಂಟೆ ಅವಧಿಗೆ ವಿಧಿಸುವ ಪ್ರೀಮಿಯಂ ಪಾರ್ಕಿಂಗ್ ದರವನ್ನು ಪರಿಚಯಿಸಿತ್ತು. ಇದರಿಂದ ಅನಗತ್ಯವಾಗಿ ನಿಲ್ದಾಣಕ್ಕೆ ಪ್ರವೇಶಿಸಿ ಪಾರ್ಕ್ ಮಾಡುವ ವಾಹನಗಳ ಸಂಖ್ಯೆ ಇಳಿಕೆಯಾಗಿತ್ತು. ಫಿಶ್ ಪೆಡಿಕ್ಯೂರ್ ಸೌಲಭ್ಯ, ಗೇಮಿಂಗ್ ವಲಯ, ಸಂಗೀತ ಕಾರಂಜಿ ಸೇರಿದಂತೆ ಇನ್ನೂ ಹಲವು ಸವಲತ್ತುಗಳನ್ನು ಆರಂಭಿಸಲು ಅದು ಯೋಜಿಸಿತ್ತು. ಆದರೆ ಕೇಂದ್ರ ಸರ್ಕಾರವು ಹಠಾತ್ತನೆ ಐಆರ್‌ಎಸ್‌ಡಿಸಿ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಉದ್ಯೋಗಿಗಳಿಗೆ ಆಘಾತ ಉಂಟುಮಾಡಿದೆ. ಕೆಎಸ್‌ಆರ್ ಬೆಂಗಳೂರು ನಗರ, ಯಶವಂತಪುರ, ಕಂಟೋನ್ಮೆಂಟ್ ಮತ್ತು ಬಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣಗಳನ್ನು ಮರುಅಭಿವೃದ್ಧಿಗಾಗಿ ಗುರುತಿಸಲಾಗಿತ್ತು. ಐಆರ್‌ಎಸ್‌ಡಿಸಿ ಸ್ಥಗಿತದೊಂದಿಗೆ ಈ ಯೋಜನೆಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಮಧ್ಯಪ್ರದೇಶದ ಹಬೂಬ್‌ಗಂಜ್ ಮತ್ತು ಗುಜರಾತ್‌ನ ಗಾಂಧಿನಗರ ನಿಲ್ದಾಣಗಳನ್ನು ಐಆರ್‌ಎಸ್‌ಡಿಸಿ ಈಗಾಗಲೇ ಮರು ಅಭಿವೃದ್ಧಿ ಮಾಡಿದೆ. ಬಯ್ಯಪ್ಪನಹಳ್ಳಿ ನಿಲ್ದಾಣದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದ್ದು, ಅದನ್ನು ರೈಲ್ವೆ ಮಂಡಳಿ ಅನುಮೋದನೆಗೆ ಕಳುಹಿಸಲಾಗಿತ್ತು. ಕಂಟೋನ್ಮೆಂಟ್ ನಿಲ್ದಾಣದಲ್ಲಿ ಭೂಮಿ ಈಗ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಬಳಿ ಇದೆ. ಅದನ್ನು ಉಪನಗರ ರೈಲ್ವೆ ನಿಲ್ದಾಣಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ನಗರ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಪರಿಕಲ್ಪನಾ ನಕ್ಷೆಯನ್ನು ಬೆಂಗಳೂರು ವಿಭಾಗದ ಅನುಮೋದನೆಗೆ ರವಾನಿಸಲಾಗಿದೆ. ಐಆರ್‌ಎಸ್‌ಡಿಸಿ ಸ್ವತಂತ್ರ ನಿಗಮವಾಗಿ ಕೆಲಸ ಮಾಡಬೇಕಿತ್ತು. ಆದರೆ ಅದರ ಕೈಗಳನ್ನು ಕಟ್ಟಿಹಾಕಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಅಂಗಡಿಗಳ ಹಂಚಿಕೆ ಮಾಡುವಾಗ ಅನೇಕ ಅಕ್ರಮಗಳು ನಡೆಯುತ್ತಿದ್ದವು. ಆದರೆ ಐಆರ್‌ಎಸ್‌ಡಿಸಿ ತನ್ನ ಹಿಡಿತಕ್ಕೆ ಪಡೆದುಕೊಂಡ ಬಳಿಕ ಇದೆಲ್ಲವೂ ನಿಯಂತ್ರಣಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.