
ಹೊಸದಿಲ್ಲಿ: ದಿಲ್ಲಿಯ ಕೊರತೆಯನ್ನು ಮೇ 3, ಸೋಮವಾರ ಮಧ್ಯರಾತ್ರಿ ಮೊದಲು ನಿವಾರಣೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ 12 ರೋಗಿಗಳು ಹಾಗೂ ಕಳೆದ ವಾರ 25 ಕೊರೊನಾ ರೋಗಿಗಳು ಆಮ್ಲಜನಕ ಸಿಗದೆ ಸಾವನ್ನಪ್ಪಿದ್ದರು. ಇದಾದ ಬೆನ್ನಿಗೆ ಸುಪ್ರೀಂ ಕೋರ್ಟ್ ಇಂಥಹದ್ದೊಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯ ಸರಕಾರದ ಜತೆ ಸೇರಿ ತುರ್ತು ಸಂದರ್ಭದಲ್ಲಿ ಬಳಕೆಗೆಂದು ಆಮ್ಲಜನಕರ ಬಫರ್ ಸ್ಟಾಕ್ (ತುರ್ತು ಸಂಗ್ರಹ) ರೂಪಿಸುವಂತೆಯೂ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಮತ್ತು ಇವುಗಳ ಸ್ಥಳಗಳನ್ನು ಬೇರೆ ಬೇರೆ ಕಡೆ ಇರುವಂತೆಯೂ ನೋಡಿಕೊಳ್ಳಲು ಹೇಳಿದೆ.
ಈ ಸಂಬಂಧ 64 ಪುಟಗಳ ವಿಸ್ತೃತ ಆದೇಶವನ್ನು ನ್ಯಾ.ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ಪೀಠ ನೀಡಿದೆ.
ರಾಷ್ಟ್ರರಾಜಧಾನಿಯ ಆಮ್ಲಜನಕ ಕೊರತೆ ಬಗ್ಗೆ ಹೈಕೋರ್ಟ್ನಲ್ಲಿ ನಿರಂತರವಾಗಿ ವಿಚಾರಣೆ ನಡೆಯುತ್ತಲೇ ಇತ್ತು. ಶನಿವಾರವಷ್ಟೆ ದಿಲ್ಲಿಯ ಹಂಚಿಕೆಯ ಆಮ್ಲಜನಕವನ್ನು ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಖಡಕ್ ಸೂಚನೆಯನ್ನೂ ಕೊಟ್ಟಿತ್ತು.
"ಹಂಚಿಕೆಗಿಂತ ಹೆಚ್ಚಿನದನ್ನು ಯಾರೂ ಕೇಳುತ್ತಿಲ್ಲ. ಇಂದು ನಿಮಗೆ ಹಂಚಿಕೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ, ನಿಮ್ಮ ವಿವರಣೆಯನ್ನು ನಾವು ಸೋಮವಾರ ನೋಡುತ್ತೇವೆ" ಎಂದು ಹೈಕೋರ್ಟ್ ಆ ಸಂದರ್ಭದಲ್ಲಿ ಹೇಳಿತ್ತು.
ದಿಲ್ಲಿಯ ಅರವಿಂದ ಕೇಜ್ರಿವಾಲ್ ಸರಕಾರ 970 ಮೆಟ್ರಿಕ್ ಟನ್ ಆಮ್ಲಜನಕಕ್ಕೆ ಆಗ್ರಹಿಸಿತ್ತು. ಹೀಗಿದ್ದೂ ಕೇಂದ್ರ ಸರಕಾರ 590 ಮೆಟ್ರಿಕ್ ಟನ್ (ಶನಿವಾರ 490 ಮೆಟ್ರಿಕ್ ಟನ್ನಿಂದ ಏರಿಕೆ ಮಾಡಲಾಗಿತ್ತು) ಮಾತ್ರ ಹಂಚಿಕೆ ಮಾಡಿತ್ತು. ಅದನ್ನೂ ಪೂರೈಕೆ ಮಾಡುತ್ತಿಲ್ಲ ಎಂದು ದಿಲ್ಲಿ ಸರಕಾರ ದೂರುತ್ತಿದೆ.