ನಕ್ಷೆ ಮಂಜೂರಾತಿ ಶುಲ್ಕ ಇಳಿಕೆಗೆ ಕಿಕ್‌ಬ್ಯಾಕ್‌ ?: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ದೂರು!

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಷ್ಠಿತ ಬಿಲ್ಡರ್ಸ್‌ಗಳಿಂದ ಕಿಕ್‌ಬ್ಯಾಕ್‌ ರೂಪದಲ್ಲಿ ಕೋಟ್ಯಂತರ ರೂ. ಪಡೆದು ನಕ್ಷೆ ಮಂಜೂರಾತಿ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಕ್ಷೆ ಮಂಜೂರಾತಿ ಶುಲ್ಕ ಇಳಿಕೆಗೆ ಕಿಕ್‌ಬ್ಯಾಕ್‌ ?: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ದೂರು!
Linkup
ಬೆಂಗಳೂರು : ಪ್ರತಿಷ್ಠಿತ ಬಿಲ್ಡರ್ಸ್‌ಗಳಿಂದ ಕಿಕ್‌ಬ್ಯಾಕ್‌ ರೂಪದಲ್ಲಿ ಕೋಟ್ಯಂತರ ರೂ. ಪಡೆದಿರುವ ಮುಖ್ಯ ಆಯುಕ್ತ ಅವರು ನಕ್ಷೆ ಮಂಜೂರಾತಿ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ(ಉತ್ತರ) ಮಂಜೇಶ್‌ ಕೂಡ ಶಾಮೀಲಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬುಧವಾರ ಎಸಿಬಿ, ಬಿಎಂಟಿಎಫ್‌ಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''2008 ಕ್ಕಿಂತ ಮೊದಲು ಇದ್ದಂತಹ ನಕ್ಷೆ ಮಂಜೂರಾತಿ ಶುಲ್ಕದ ಪದ್ಧತಿಯಂತೆ ಶುಲ್ಕ ಸಂಗ್ರಹ ಮಾಡಲು ಆದೇಶ ಹೊರಡಿಸಿದ್ದಾರೆ. ಮುಖ್ಯ ಆಯುಕ್ತರು ಗೌಪ್ಯವಾಗಿ ಹೊರಡಿಸಿರುವ ಈ ಆದೇಶದ ಪ್ರತಿಯಲ್ಲಿ ದಿನಾಂಕವನ್ನೇ ನಮೂದಿಸಿಲ್ಲ. ಜತೆಗೆ ರವಾನೆ ಸಂಖ್ಯೆ ನಮೂದಿಸದೆಯೇ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ,'' ಎಂದು ಹೇಳಿದರು. ''ಕ್ರೆಡಾಯ್‌ ಮತ್ತು ಬಿಆರ್‌ಎಐ ಸಂಸ್ಥೆಯ ಬಿಲ್ಡರ್‌ಗಳು ನಕ್ಷೆ ಮಂಜೂರಾತಿ ಶುಲ್ಕದಿಂದ ವಿನಾಯಿತಿ ಕೋರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಪಾವತಿಸುವ ಅಗತ್ಯವಿಲ್ಲವೆಂದು ಮಧ್ಯಂತರ ಆದೇಶ ನೀಡಿತು. ಆದರೆ, ಪಾಲಿಕೆಯು ಈ ಆದೇಶ ಪ್ರಶ್ನಿಸಿ ಮೇಲ್ಮನವಿಯನ್ನೇ ಸಲ್ಲಿಸದೆ, ಶುಲ್ಕವನ್ನು ಕಡಿತಗೊಳಿಸಿ, ಬಿಲ್ಡರ್ಸ್‌ಗಳಿಗೆ ಅನುಕೂಲ ಮಾಡಿಕೊಟ್ಟಿದೆ,'' ಎಂದು ಆಪಾದಿಸಿದರು. ''ಯಾವುದೇ ಒಂದು ಕಟ್ಟಡದ ನಕ್ಷೆ ಮಂಜೂರಾತಿಗೆ ಪ್ರಸ್ತುತ ಒಂದು ಲಕ್ಷ ರೂ. ಶುಲ್ಕವಿದ್ದರೆ, 2008ಕ್ಕಿಂತ ಹಿಂದಿನ ಪದ್ಧತಿಯಂತೆ ಸಂಗ್ರಹಿಸಿದಾಗ ಕೇವಲ 30 ಸಾವಿರ ರೂ. ಮಾತ್ರ ಆದಾಯ ಬರುತ್ತದೆ,'' ಎಂದರು. ಬಿಬಿಎಂಪಿಗೆ ನಗರ ಯೋಜನೆ ಇಲಾಖೆಯಿಂದ ಮಂಜೂರಾಗುವ ನಕ್ಷೆ ಮಂಜೂರಾತಿ ಶುಲ್ಕವು ಪಾಲಿಕೆಗೆ 3ನೇ ಅತಿ ದೊಡ್ಡ ಆದಾಯದ ಮೂಲವಾಗಿದ್ದು, ವರ್ಷಪೂರ್ತಿ ಸರಾಸರಿ 600 ಕೋಟಿ ರೂ ಆದಾಯವನ್ನು ಪಾಲಿಗೆ ತೆಗೆದುಕೊಳ್ಳುತ್ತಿದೆ. ನಕ್ಷೆ ಮಂಜೂರಾತಿ ಶುಲ್ಕವನ್ನು ಶೇ. 78% ರಷ್ಟು ಕಡಿತಗೊಳಿಸುವ ಹುನ್ನಾರ ನಡೆದಿದೆ. ಸೀಮಿತ ವಾರ್ಷಿಕ ಆದಾಯವನ್ನು ಹೊಂದಿರುವ ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಹೊರಟಿರುವುದು ವಿರೋಧೀ ನಿರ್ಣಯ ಎಂದು ಆಕ್ರೋಶ ಹೊರಹಾಕಿದರು. ದೂರು ನೀಡಿದ ಎನ್ಆರ್‌ ರಮೇಶ್‌! ಇನ್ನು ಇದೆ ವೇಳೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಜಂಟಿ ನಿರ್ದೇಶಕರು (ಉತ್ತರ) ನಗರ ಯೋಜನೆ ಮಂಜೇಶ್ ವಿರುದ್ಧ ACB ಮತ್ತು BMTF ಗಳಲ್ಲಿ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಪ್ರಕರಣ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಇವರ ಇಬ್ಬರ ನಡುವೆ ಕ್ರಮಕೈಗೊಳ್ಳುವಂಎ ಎನ್‌ ಆರ್‌ ರಮೇಶ್‌ ಆಗ್ರಹಿಸಿದ್ದಾರೆ.