ಕಸ ವಿಲೇವಾರಿ ಮಾಡದ ಬಿಬಿಎಂಪಿ; ಗಬ್ಬೆದ್ದು ನಾರುತ್ತಿದೆ ಪೀಣ್ಯ ಕೈಗಾರಿಕಾ ಪ್ರದೇಶ!

ಬಿಬಿಎಂಪಿಯವರು ಕೈಗಾರಿಕಾ ತ್ಯಾಜ್ಯ ವಿಲೇವಾರಿ ಮಾಡಲು ತಮಗೆ ಪರವಾನಗಿ ಇಲ್ಲ ಎಂಬ ಸಬೂಬು ಹೇಳಿ ಕೈಚೆಲ್ಲಿರುವುದರಿಂದ ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಪೀಣ್ಯ ಕೈಗಾರಿಕೆಗಳಿಂದ ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಬಿಬಿಎಂಪಿಗೆ ಸಂದಾಯವಾಗುತ್ತದೆ. ಆದರೂ ಬಿಬಿಎಂಪಿ ಸಲ್ಲದ ಕಾರಣ ನೀಡಿ ಕಸ ತೆರವುಗೊಳಿಸುತ್ತಿಲ್ಲ

ಕಸ ವಿಲೇವಾರಿ ಮಾಡದ ಬಿಬಿಎಂಪಿ; ಗಬ್ಬೆದ್ದು ನಾರುತ್ತಿದೆ ಪೀಣ್ಯ ಕೈಗಾರಿಕಾ ಪ್ರದೇಶ!
Linkup
ಹನುಮಂತರಾಜು ಬಿ.ಕೆ. ಪೀಣ್ಯ ದಾಸರಹಳ್ಳಿ ಬೆಂಗಳೂರು: ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈಗ ಹೊಲಸು ನಾರುವ ಪ್ರದೇಶ ಎಂಬ ಕುಖ್ಯಾತಿ ಪಡೆಯುವ ಹಾದಿಯತ್ತ ಸಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶವು ರಾಜರಾಜೇಶ್ವರಿ ನಗರ, ದಾಸರಹಳ್ಳಿ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಇದು ಕೂಡ ಒಂದು ರೀತಿಯಲ್ಲಿ ಪೀಣ್ಯ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎನ್ನಬಹುದು. ಅವರು ಅಭಿವೃದ್ಧಿಪಡಿಸಲಿ ಎಂದು ಇವರು, ಇವರು ಅಭಿವೃದ್ಧಿಪಡಿಸಲಿ ಎಂದು ಅವರು, ಹೀಗೆ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಪರಿಸ್ಥಿತಿ ಪೀಣ್ಯ ಕೈಗಾರಿಕಾ ಪ್ರದೇಶದ್ದಾಗಿದೆ. ಬಿಬಿಎಂಪಿಯವರು ಕೈಗಾರಿಕಾ ತ್ಯಾಜ್ಯ ವಿಲೇವಾರಿ ಮಾಡಲು ತಮಗೆ ಪರವಾನಗಿ ಇಲ್ಲ ಎಂಬ ಸಬೂಬು ಹೇಳಿ ಕೈಚೆಲ್ಲಿರುವುದರಿಂದ ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಪೀಣ್ಯ ಕೈಗಾರಿಕೆಗಳಿಂದ ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಬಿಬಿಎಂಪಿಗೆ ಸಂದಾಯವಾಗುತ್ತದೆ. ಆದರೂ ಸಲ್ಲದ ಕಾರಣ ನೀಡಿ ಕಸ ತೆರವುಗೊಳಿಸುತ್ತಿಲ್ಲ. ಪ್ರತಿ ರಸ್ತೆಗಳ ತಿರುವುಗಳಲ್ಲಿ, ಖಾಲಿ ಜಾಗಗಳಲ್ಲಿ ರಾಶಿ ರಾಶಿ ಕಸ ಕಣ್ಣಿಗೆ ರಾಚುವುದರ ಜತೆಗೆ ದುರ್ನಾತ ಮೂಗಿಗೆ ಬಡಿಯುತ್ತದೆ. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ''ಪೀಣ್ಯ ಪ್ರದೇಶದಲ್ಲಿ ಮೂಲಸೌಲಭ್ಯಗಳ ಕೊರತೆ ತೀವ್ರವಾಗಿದೆ. ಕೈಗಾರಿಕಾ ತ್ಯಾಜ್ಯ ವಿಲೇವಾರಿ ಮಾಡಲು ನಮಗೆ ಅನುಮತಿ ಇಲ್ಲ ಎಂದು ಕಾರಣ ಹೇಳಿ ಬಿಬಿಎಂಪಿ ಹಿಂದೆ ಸರಿದಿರುವುದರಿಂದ ಸಮಸ್ಯೆ ದೊಡ್ಡದಾಗಿದೆ. ಬಿಬಿಎಂಪಿ ಮಾಡುತ್ತಿಲ್ಲ. ಆದರೆ ಕಸ ಎಲ್ಲಿ ಹಾಕಬೇಕು ಎಂದು ಸ್ಥಳ ಕೂಡ ನಿಗದಿಪಡಿಸದ ಕಾರಣ ಕಸದ ರಾಶಿ ಬೆಳೆಯುತ್ತಿದೆ,'' ಎಂದು ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿ.ಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು. ಪೀಣ್ಯ ಕೈಗಾರಿಕಾ ಪ್ರದೇಶದ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ಅವರನ್ನು ಕರೆಸಿ ಚರ್ಚಿಸಿದ್ದೇವೆ. ಕಸದ ಸಮಸ್ಯೆ ಬಗ್ಗೆ ಆಯುಕ್ತರು ಹಾಗೂ ಶಾಸಕ ಮಂಜುನಾಥ್‌ ಖುದ್ದಾಗಿ ವೀಕ್ಷಿಸಿದ್ದಾರೆ. ಆಯುಕ್ತರು ನೀಡಿದ ಭರವಸೆ ಹುಸಿಯಾಗಿದೆ. ಸಿ.ಪ್ರಕಾಶ್‌, ಅಧ್ಯಕ್ಷ, ಪೀಣ್ಯ ಕೈಗಾರಿಕೆಗಳ ಸಂಘ ಕಸ ವಿಲೇವಾರಿ ಸೇರಿದಂತೆ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಒಳಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ 'ಪೀಣ್ಯ ಇಂಡಸ್ಟ್ರಿಯಲ್‌ ಟೌನ್‌ ಪ್ಲಾನಿಂಗ್‌ ಅಥಾರಿಟಿ' ರಚನೆ ಮಾಡಿ ನಮಗೇ ಜವಾಬ್ದಾರಿ ನೀಡಿದರೆ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಸರಕಾರಕ್ಕೆ ಸಲ್ಲಬೇಕಾದ ತೆರಿಗೆಯೂ ಸಲ್ಲುವಂತೆ ವ್ಯವಸ್ಥೆ ಮಾಡುತ್ತೇವೆ. ಶ್ಯಾಮ್‌ಚಂದ್ರನ್‌, ಕಾರ್ಯದರ್ಶಿ, ಪೀಣ್ಯ ಕೈಗಾರಿಕೆಗಳ ಸಂಘ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕೈಗಾರಿಕೆಗಳಿವೆ. ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೆ ಇಲ್ಲಿ ಮತದಾರರು ಇಲ್ಲದ ಕಾರಣ ಈ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಲ್ಲೇಶ್‌ ಗೌಡ, ಕೈಗಾರಿಕೋದ್ಯಮಿ