![](https://vijaykarnataka.com/photo/88401280/photo-88401280.jpg)
ಚೆನ್ನೈ: ಮುಜುಗರ ಉಂಟು ಮಾಡುವ ಖಾಸಗಿ ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡು 10ನೇ ತರಗತಿಯ ಬಾಲಕಿಯರಿಬ್ಬರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕೊಂದು ಹಾಕಿದ ಘಟನೆ ಚೆನ್ನೈ ಹೊರ ವಲಯದಲ್ಲಿ ನಡೆದಿದೆ.
ಖಾಸಗಿ ಫೋಟೊ ಹಾಗೂ ವಿಡಿಯೋ ತೋರಿಸಿ ನಿರಂತರ ಸುಲಿಗೆ ಮಾಡುತ್ತಿದ್ದ ಪ್ರೇಮ್ಕುಮಾರ್ (20) ಹತನಾದ ವಿದ್ಯಾರ್ಥಿ. ಈತ ಸಂತ್ರಸ್ತ ಬಾಲಕಿಯರು ರೂಪಿಸಿದ ಸಂಚಿಗೆ ಬಲಿಯಾಗಿದ್ದಾನೆ. ಆತನ ಮೃತದೇಹ ವಶಪಡಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಸ್ತೃತ ತನಿಖೆ ನಡೆಸಿದ್ದಾರೆ.
ಕೃತ್ಯಕ್ಕೆ ಮತ್ತೊಬ್ಬನ ನೆರವು: ಪೊಲೀಸರು ಹೇಳುವ ಪ್ರಕಾರ, ದಿನಗೂಲಿ ನೌಕರ ರವಿಚಂದ್ರನ್ ಎಂಬುವವರ ಪುತ್ರ ಪ್ರೇಮಕುಮಾರ್ ಪಿಯು ಮುಗಿಸಿ ಆಗ ತಾನೇ ಡಿಗ್ರಿಗೆ ಪ್ರವೇಶ ಪಡೆದಿದ್ದ. ಒಂದು ದಿನ ಬಿಡುವಿನ ವೇಳೆ ವಂಡಲೂರಿನ ವನ್ಯಧಾಮಕ್ಕೆ ಹೋಗಿ ಸುತ್ತಾಡುತ್ತಿದ್ದಾಗ 10ನೇ ತರಗತಿಯ ಇಬ್ಬರು ಬಾಲಕಿಯರು ಸಂಪರ್ಕಕ್ಕೆ ಬಂದಿದ್ದರು. ನಂತರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಇಬ್ಬರ ಜತೆ ಸ್ನೇಹ ಬೆಳೆಸಿದ್ದ. ಅದಾಗಿ ಅವರ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದ ಪ್ರೇಮಕುಮಾರ್, ದಿನ ಕಳೆದಂತೆ ಆ ಚಿತ್ರಗಳನ್ನೇ ತೋರಿಸಿ ಬ್ಲ್ಯಾಕ್ಮೇಲ್ ಶುರು ಮಾಡಿದ್ದಾನೆ.
ಆರಂಭದಲ್ಲಿ ವಿದ್ಯಾರ್ಥಿನಿಯರು ಆತ ಕೇಳಿದಷ್ಟು ದುಡ್ಡು ಕೊಟ್ಟರು. ಒಂದು ವರ್ಷದಲ್ಲಿ 1.5 ಲಕ್ಷ ರೂ.ಗಳನ್ನು ವಿದ್ಯಾರ್ಥಿನಿಯರಿಂದ ವಸೂಲಿ ಮಾಡಿದ. ಕೈ ಬರಿದಾದಾಗ ವಿದ್ಯಾರ್ಥಿನಿಯರು ಕೊಡಲು ಹಣವಿಲ್ಲದೇ ಚಡಪಡಿಸಿದರು. ಇದೇ ವೇಳೆ, ಇನ್ಸ್ಟಾಗ್ರಾಮ್ನಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಫ್ರೆಂಡ್ ಮಾಡಿಕೊಂಡ ಬಾಲಕಿಯರು, ಆತನ ಮುಂದೆ ಸಂಕಷ್ಟ ತೋಡಿಕೊಂಡರು. ಆ ಇನ್ಸ್ಟಾಗ್ರಾಮ್ ಫ್ರೆಂಡ್ ಪ್ರೇಮ್ಕುಮಾರ್ ಕೊಲೆಗೆ ಸಂಚು ರೂಪಿಸಿದ. ನಿರ್ದಿಷ್ಟ ಸ್ಥಳಕ್ಕೆ ಆತನನ್ನು ಕರೆತರುವಂತೆ ಬಾಲಕಿಯರಿಗೆ ಸೂಚಿಸಿದ. ಅದರಂತೆ ಮನ ಒಲಿಸಿ ಪ್ರೇಮ್ಕುಮಾರ್ನನ್ನು ರೆಡ್ಹಿಲ್ಸ್ ಪ್ರದೇಶಕ್ಕೆ ಬರುವಂತೆ ಮಾಡಿದರು. ಅಲ್ಲಿ ಸಹಚರ ಜತೆ ಕಾಯ್ದಿದ್ದ ಇನ್ಸ್ಟಾಗ್ರಾಮ್ ಫ್ರೆಂಡ್, ಹಠಾತ್ ದಾಳಿ ನಡೆಸಿ ಪ್ರೇಮ್ಕುಮಾರ್ನನ್ನು ಅಪಹರಿಸಿ ಗುಮ್ಮಿಡಿ ಪೊಂಡಿ ಪ್ರದೇಶದ ದುರ್ಗಮ ತಾಣಕ್ಕೆ ಸಾಗಿಸಿ, ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದಾರೆ.
ಮೃತ ದೇಹವನ್ನು ಕಾಡಿನಲ್ಲಿ ಹೂತ ದುಷ್ಕರ್ಮಿಗಳು ಏನೂ ನಡೆದೇ ಇಲ್ಲ ಎಂಬಂತೆ ಮನೆಗೆ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣದ ವೇಳೆ ಜೊತೆಗಿದ್ದು ತಪ್ಪಿಸಿಕೊಂಡು ಮನೆಗೆ ಬಂದಿದ್ದ ಪ್ರೇಮ್ ಕುಮಾರ್ನ ಸ್ನೇಹಿತ ನೀಡಿದ ಸುಳಿವು, ಈ ಚಕ್ರವ್ಯೂಹ ಭೇದಿಸಲು ನೆರವಾಯಿತು.