3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದ್ರೆ ಹಾಸ್ಟೆಲ್‌ ಕೂಡಾ ಕಂಟೈನ್ಮೆಂಟ್‌ ವಲಯ..!

ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರತ್ಯೇಕ ಆರೈಕೆಗೆ ಅವಕಾಶವಿಲ್ಲದ ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದ್ರೆ ಹಾಸ್ಟೆಲ್‌ ಕೂಡಾ ಕಂಟೈನ್ಮೆಂಟ್‌ ವಲಯ..!
Linkup
: ಬಿಬಿಎಂಪಿ ವ್ಯಾಪ್ತಿಯ ಕೆಲವೊಂದು ಹಾಸ್ಟೆಲ್‌ಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಮೂರು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬಂದಿರುವ ಹಾಸ್ಟೆಲ್‌ಗಳನ್ನೂ ಕಂಟೈನ್ಮೆಂಟ್‌ ವಲಯಗಳೆಂದು ಗುರುತಿಸಿ, ಸೋಂಕು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರತ್ಯೇಕ ಆರೈಕೆಗೆ ಅವಕಾಶವಿಲ್ಲದ ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ' ಎಂದರು. 'ನಗರದಲ್ಲಿ 11 ಲಕ್ಷ ಮಂದಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ವಾಸವಿದ್ದಾರೆ. ಇಲ್ಲಿನ ಒಂದು ಸಾವಿರಕ್ಕೂ ಹೆಚ್ಚು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಎಲ್ಲರೂ ಕೋವಿಡ್‌ ನಿಯಂತ್ರಣಕ್ಕೆ ಸ್ಪಂದಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆ 10ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಮಾತ್ರ ಕಂಟೈನ್ಮೆಂಟ್‌ ವಲಯವೆಂದು ಘೋಷಿಸುತ್ತಿದ್ದೆವು. ಈಗ ಪ್ರಕರಣಗಳ ಸಂಖ್ಯೆ 3 ಅಥವಾ ಅದಕ್ಕಿಂತ ಜಾಸ್ತಿ ಇರುವ ಪ್ರದೇಶವನ್ನೂ ಕಂಟೈನ್ಮೆಂಟ್‌ ವಲಯವೆಂದು ಗುರುತಿಸಲಾಗುತ್ತಿದೆ. ಹೀಗಾಗಿಯೇ, ನಗರದಲ್ಲಿ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ' ಎಂದು ಹೇಳಿದರು. 'ಸೋಂಕು ದೃಢಪಟ್ಟ ಶೇ.95ರಷ್ಟು ಮಂದಿ ಯಾವುದೇ ಸಮಸ್ಯೆ ಇಲ್ಲದೆ ಗುಣಮುಖರಾಗುತ್ತಿದ್ದಾರೆ. ಇವರು ಹೋಮ್‌ ಐಸೋಲೇಷನ್‌ನಲ್ಲಿರುವ 10-15 ದಿನಗಳ ಅವಧಿಯಲ್ಲಿಇತರರಿಗೆ ಸೋಂಕು ಹರಡಬಾರದು ಎಂಬ ಉದ್ದೇಶದಿಂದಲೇ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಿ, ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂಥ ವಲಯಗಳಲ್ಲಿ ಸುತ್ತಮುತ್ತಲಿನ ನಿವಾಸಿಗಳನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ' ಎಂದು ತಿಳಿಸಿದರು. 'ಸರಕಾರಿ ಕೋಟಾದಡಿ ನಾನಾ ಆಸ್ಪತ್ರೆಗಳಲ್ಲಿ 180 ಮಂದಿ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದವರು ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿದ್ದು, ಗುಣಮುಖರಾಗುತ್ತಿದ್ದಾರೆ. ಐಸಿಯು, ಆಕ್ಸಿಜನ್‌ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 50ಕ್ಕಿಂತ ಜಾಸ್ತಿ ಇಲ್ಲ. ನಗರದಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ.1ಕ್ಕಿಂತ ಕಡಿಮೆ ಇದ್ದು, ಮತ್ತಷ್ಟು ತಗ್ಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ' ಎಂದರು. ಶಿಕ್ಷಕರಿಗೆ ಲಸಿಕೆ ಕಡ್ಡಾಯ: 'ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಸರಕಾರ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯು ತರಗತಿ ಆರಂಭಕ್ಕೆ ಮುನ್ನ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ' ಎಂದು ಗೌರವ್‌ ಗುಪ್ತ ಹೇಳಿದರು.