ಕೊರೊನಾ ಪ್ರಕರಣಗಳ ಇಳಿಕೆಗೆ ಬಿಬಿಎಂಪಿ ವಾಮಮಾರ್ಗ..? ಶೇ 50ರಷ್ಟು ಟೆಸ್ಟಿಂಗ್‌ ಪ್ರಮಾಣ ಕಡಿತ..!

ಒಂದು ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿದ್ದಾಗ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಸದ್ಯ ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಸೋಂಕಿತರ ಸಂಖ್ಯೆ 9-10 ಸಾವಿರ ದಾಟುತ್ತಿಲ್ಲ.

ಕೊರೊನಾ ಪ್ರಕರಣಗಳ ಇಳಿಕೆಗೆ ಬಿಬಿಎಂಪಿ ವಾಮಮಾರ್ಗ..? ಶೇ 50ರಷ್ಟು ಟೆಸ್ಟಿಂಗ್‌ ಪ್ರಮಾಣ ಕಡಿತ..!
Linkup
ನಾಗಪ್ಪ ನಾಗನಾಯಕನಹಳ್ಳಿ: ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ಮಹಾನಗರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದರೆ, ವಾಸ್ತವವಾಗಿ ಎರಡನೇ ಅಲೆಯ ಆರ್ಭಟ ತಹಬದಿಗೆ ಬಂದಿಲ್ಲ. ಬಿಬಿಎಂಪಿಯು ಕೋವಿಡ್‌ ಪ್ರಮಾಣವನ್ನು ತಗ್ಗಿಸಿರುವುದರಿಂದಲೇ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಗರದಲ್ಲಿ ಕೋವಿಡ್‌ ಸೋಂಕಿನ ಎರಡನೇ ಅಲೆಯು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಾಲಿಕೆಯು, ನಿತ್ಯ ಒಂದು ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿತ್ತು. ಏಪ್ರಿಲ್‌ ತಿಂಗಳಿನಲ್ಲಿ 23,57,679 ಕೋವಿಡ್‌ ಪರೀಕ್ಷೆಗಳು ನಡೆದಿವೆ. ಪ್ರತಿ ದಿನ ಸರಾಸರಿ 78,500 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಹೀಗಾಗಿಯೇ, ಪ್ರಕರಣಗಳ ಸಂಖ್ಯೆಯು 25 ಸಾವಿರ ದಾಟಿತ್ತು. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದರಿಂದ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್‌ಗಳು ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಪಾಲಿಕೆಯು ಸೋಂಕಿನ ಅಂಕಿ-ಸಂಖ್ಯೆ ಕಡಿಮೆ ಮಾಡುವ 'ಆಟ' ಶುರು ಮಾಡಿದೆ. ಮೇ ತಿಂಗಳ ಆರಂಭದಿಂದ ಪರೀಕ್ಷೆಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿಮೆ ಮಾಡಿದೆ. ಇದರ ಪರಿಣಾಮ, ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿಇಳಿಕೆಯಾಗಿದೆ. ಮೇ 15ರವರೆಗೆ ಕೇವಲ 7,45,388 ಪರೀಕ್ಷೆಗಳನ್ನು ಮಾಡಲಾಗಿದ್ದು, ನಿತ್ಯ 45 ರಿಂದ 50 ಸಾವಿರ ಮಂದಿಗಷ್ಟೇ ಪರೀಕ್ಷೆ ಮಾಡಲಾಗುತ್ತಿದೆ. ಕೊರೊನಾ ಮೊದಲ ಅಲೆ ವೇಳೆ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರು, ಸುತ್ತಮುತ್ತಲ ನಿವಾಸಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ಫಲಿತಾಂಶ ಬಂದ ತಕ್ಷಣವೇ ಕೈಗಳಿಗೆ ಮುದ್ರೆ ಹಾಕಿ, ಹೊರಗಡೆ ಅಡ್ಡಾಡದಂತೆ ನೋಡಿಕೊಳ್ಳಲಾಯಿತು. ನೇರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಈ ವಿಧಾನದ ಮೂಲಕವೇ ಸೋಂಕು ನಿಯಂತ್ರಣಕ್ಕೆ ತರುವಲ್ಲಿಯಶಸ್ವಿಯಾಗಿತ್ತು. ಆದರೆ, ಇದೀಗ ಸೋಂಕಿತರೊಂದಿಗೆ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ, ಪರೀಕ್ಷೆ ಮಾಡುವುದನ್ನು ಕೈಬಿಡಲಾಗಿದೆ. ಒಂದು ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿದ್ದಾಗ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಸದ್ಯ ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಸೋಂಕಿತರ ಸಂಖ್ಯೆ 9-10 ಸಾವಿರ ದಾಟುತ್ತಿಲ್ಲ. ಆರ್‌ಟಿಪಿಸಿಆರ್‌- ಕಿಟ್‌ಗಳ ಕೊರತೆ ಇಲ್ಲ: 'ಆರ್‌ಟಿ-ಪಿಸಿಆರ್‌, ಆಂಟಿಜನ್ ಕಿಟ್‌ಗಳ ಕೊರತೆ ಇಲ್ಲ. ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ಐಎಲ್‌ಐ, ಸಾರಿ, ರೋಗ ಲಕ್ಷಣವುಳ್ಳವರು ಹಾಗೂ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರನ್ನಷ್ಟೇ ಗುರಿಯಾಗಿಟ್ಟುಕೊಂಡು ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚಿನ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಜನ ಸಂಚಾರ ಕಡಿಮೆಯಾಗಿದೆ. ಬಸ್‌, ಆಟೊ, ಟ್ಯಾಕ್ಸಿ ಸಂಚಾರವೂ ಇಲ್ಲ. ಶುಭ ಸಮಾರಂಭಗಳಿಗೂ ನಿರ್ಬಂಧ ಹೇರಲಾಗಿದೆ. ಪರಿಣಾಮ ಸೋಂಕು ಹರಡುವುದಕ್ಕೆ ಕಡಿವಾಣ ಬಿದ್ದಿದೆ' ಎಂದು ಪಾಲಿಕೆಯ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದರು. ಸೋಂಕು ಪತ್ತೆ ಪ್ರಮಾಣ ಶೇ 36.89: ಸೋಂಕು ಪತ್ತೆ ಪ್ರಮಾಣವು ಹೆಚ್ಚಳವಾಗುತ್ತಲೇ ಇದ್ದು, ಸದ್ಯ ಶೇ 36.89ರಷ್ಟಿದೆ. ಮಾರ್ಚ್‌ನಲ್ಲಿ ಶೇ 2.31 ಮತ್ತು ಏಪ್ರಿಲ್‌ನಲ್ಲಿ ಶೇ 14.35ರಷ್ಟಿತ್ತು. ಪಾಲಿಕೆಯ 198 ವಾರ್ಡ್‌ಗಳ ಪೈಕಿ 97ರಲ್ಲಿ 500ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಪಿಎಚ್‌ಸಿಗಳಲ್ಲಷ್ಟೇ ಪರೀಕ್ಷೆ: ಆರೋಗ್ಯ ಸಿಬ್ಬಂದಿಯು ಬಸ್‌, ರೈಲು ನಿಲ್ದಾಣ, ಮಾರುಕಟ್ಟೆಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದನ್ನು ನಿಲ್ಲಿಸಲಾಗಿದೆ. ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರಕಾರಿ ಆಸ್ಪತ್ರೆಗಳ ಬಳಿ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಜತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಬಂದವರನ್ನೆಲ್ಲಾ ಪರೀಕ್ಷೆಗೊಳಪಡಿಸುತ್ತಿಲ್ಲ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು, ರೋಗ ಲಕ್ಷಣವುಳ್ಳವರು, ಐಎಲ್‌ಐ, ಸಾರಿ ಮತ್ತು ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದವರನ್ನಷ್ಟೇ ಪರೀಕ್ಷೆ ಮಾಡಿ ಸೋಂಕು ಪತ್ತೆ ಮಾಡಲಾಗುತ್ತಿದೆ. ಸೋಂಕಿತರೊಂದಿಗೆ ಪರೋಕ್ಷ ಸಂಪರ್ಕಕ್ಕೆ ಬಂದಿದ್ದವರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಸಂಚಾರ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ ಪಿಎಚ್‌ಸಿಗಳಿಗೂ ಹೆಚ್ಚಿನ ಸಂಖ್ಯೆಯ ಜನರು ಪರೀಕ್ಷೆಗೆ ಬರುತ್ತಿಲ್ಲ. ಇನ್ನು ಕೆಲವರು ಸೋಂಕಿನ ಬಗೆಗಿನ ಭಯದಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ.