ತೆಲಂಗಾಣದಲ್ಲಿ ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ..! 2023ರ ಚುನಾವಣೆಗೆ ಕೇಸರಿ ಪಡೆಯ ತಾಲೀಮು ಆರಂಭ

ನೆರೆ ರಾಜ್ಯ ತೆಲಂಗಾಣದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಶನಿವಾರದಿಂದ ಬೃಹತ್‌ ಪಾದಯಾತ್ರೆಯನ್ನು ಬಿಜೆಪಿ ಆರಂಭಿಸಿದ್ದು, ಒಟ್ಟು 55 ದಿನಗಳ ಕಾಲ ಬಿಜೆಪಿಯ ಪ್ರಜಾ ಸಂಗ್ರಾಮ ಯಾತ್ರೆ ನಡೆಯಲಿದೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಸಿಎಂ ಕೆಸಿಆರ್‌ ಹಾಗೂ ಅಸಾದುದ್ದೀನ್‌ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ..! 2023ರ ಚುನಾವಣೆಗೆ ಕೇಸರಿ ಪಡೆಯ ತಾಲೀಮು ಆರಂಭ
Linkup
ತೆಲಂಗಾಣದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಮುಂದಾಗಿರುವ 55 ದಿನಗಳ ಪಾದಯಾತ್ರೆಯನ್ನು ಆರಂಭಿಸಿದೆ. ಕೋವಿಡ್‌ ಮೂರನೇ ಅಲೆ ಭೀತಿ ನಡುವೆಯೂ ಭಾರೀ ಜನಸ್ತೋಮದೊಂದಿಗೆ ಬಿಜೆಪಿ ಅಧ್ಯಕ್ಷ ಹಾಗೂ ಕರಿಂನಗರ ಸಂಸದ ಕೂಡ ಆಗಿರುವ ಬಂಡಿ ಸಂಜಯ್‌ ನೇತೃತ್ವದಲ್ಲಿ ಹೈದರಾಬಾದ್‌ನಿಂದ ಪ್ರಜಾ ಸಂಗ್ರಾಮ ಆರಂಭವಾಗಿದೆ. ಪ್ರಜಾ ಸಂಗ್ರಾಮ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಂಡಿ ಸಂಜಯ್‌, ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಹಾಗೂ ಅವರ ಕುಟುಂಬದ ನಿರಂಕುಶ ಆಡಳಿತದಿಂದ ತೆಲಂಗಾಣವನ್ನು ಸ್ವಾತಂತ್ರ್ಯಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಲ್ಲದೇ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಗುರಿಯಾಗಿಸಿಕೊಂಡು ತಾಲಿಬಾನ್‌ ಮನಸ್ಥಿತಿಯ ಪಕ್ಷ ನಿಮಗೆ ಬೇಕಾ ಎಂದು ನೆರೆದವರನ್ನು ಪ್ರಶ್ನಿಸಿದರು. ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಯುವಕರಿಗೆ ಉದ್ಯೋಗ ಹಾಗೂ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದರು. ಅದಲ್ಲದೇ 125 ಅಡಿಯ ಬಿಆರ್‌ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ, ಯಾವುದು ಕೂಡ ಈಡೇರಿಲ್ಲ. ತೆಲಂಗಾಣ ರಚನೆಯಿಂದ ಒಂದು ಕುಟುಂಬ ಮಾತ್ರ ಲಾಭ ಪಡೆಯುತ್ತಿದೆ. ಅವರು ಈಗ ದಲಿತ ಬಂಧು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ನಿರುದ್ಯೋಗಿ ಯುವಕರು, ರೈತರು, ವಿದ್ಯಾರ್ಥಿಗಳ ಆತ್ಮಹತ್ಯೆ ನಡೆದಾಗ ಸಿಎಂ ಎಲ್ಲಿ ಹೋಗಿದ್ದರು ಎಂದು ಬಂಡಿ ಸಂಜಯ್‌ ಪ್ರಶ್ನಿಸಿದ್ದಾರೆ. ಹೈದರಾಬಾದ್ ಓಲ್ಡ್‌ ಸಿಟಿಯಲ್ಲಿ ಗಣೇಶ ಶೋಭಾ ಯಾತ್ರೆ ಹಾಗೂ ಹನುಮ ಜಯಂತಿ ಆಯೋಜಿಸುವಂತೆ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರಿಗೆ ಬಂಡಿ ಸಂಜಯ್‌ ಇದೇ ವೇಳೆ ಸವಾಲು ಹಾಕಿದರು. ಚಾರ್‌ಮಿನಾರ್‌ ಬಳಿಯ ಭಾಗ್ಯಲಕ್ಷ್ಮೀ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿದ್ದು, ಅಲ್ಲಿನ ಪ್ರದೇಶ ಪೂರ್ತಿ ಬಿಜೆಪಿ ಬಾವುಟ, ಬ್ಯಾನರ್‌, ಹೋರ್ಡಿಂಗ್‌ಗಳಿಂದ ಕೇಸರಿಮಯವಾಗಿದೆ. ಪಾದಯಾತ್ರೆಯಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್‌ ರೆಡ್ಡಿ ಕೂಡ ಭಾಗವಹಿಸಿದ್ದರು. ಜೈ ಶ್ರೀರಾಮ್‌, ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕಾರ್ಯಕರ್ತರು ಕೂಗುವುದು ಸಾಮಾನ್ಯವಾಗಿತ್ತು. ಸಾವಿರಾರು ಜನ ನೆರೆದಿದ್ದರಿಂದ ಕೋವಿಡ್‌ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು. ಸಾಮಾಜಿಕ ಅಂತರ ಮಾಯವಾಗಿದ್ದರೆ, ಹಲವರು ಮಾಸ್ಕ್‌ ಧರಿಸದಿರುವುದು ಕಂಡುಬಂತು. ಕೋವಿಡ್‌ ಮೂರನೇ ಅಲೆ ಭೀತಿ ಹಿನ್ನೆಲೆ ಈ ಯಾತ್ರೆ ಕಳವಳಕಾರಿ ಎಂದು ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.