ಉದ್ಧವ್-ಕೆಸಿಆರ್ ಭೇಟಿ ವೇಳೆ ಪ್ರಕಾಶ್ ರಾಜ್ ಉಪಸ್ಥಿತಿ: ಟಿಆರ್‌ಎಸ್ ಸೇರುತ್ತಾರಾ ಬಹುಭಾಷಾ ನಟ?

ಬಹುಭಾಷಾ ನಟ ಹಾಗೂ ಪ್ರಧಾನಿ ಮೋದಿ ಟೀಕಾಕಾರರಲ್ಲಿ ಮುಂಚೂಣಿಯಲ್ಲಿರುವ ಪ್ರಕಾಶ್ ರಾಜ್, ನಿನ್ನೆ(ಫೆ.20-ಭಾನುವಾರ) ನಡೆದ ತೆಲಂಗಾಣ ಸಿಎಂ ಹಾಗೂ ಮಹಾರಾಷ್ಟ್ರ ಸಿಎಂ ನಡುವಿನ ಮಾತುಕತೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಪ್ರಕಾಶ್ ರಾಜ್ ಅವರ ಉಪಸ್ಥಿತಿ ದೇಶದ ಗಮನ ಸೆಳೆದಿದೆ.

ಉದ್ಧವ್-ಕೆಸಿಆರ್ ಭೇಟಿ ವೇಳೆ ಪ್ರಕಾಶ್ ರಾಜ್ ಉಪಸ್ಥಿತಿ: ಟಿಆರ್‌ಎಸ್ ಸೇರುತ್ತಾರಾ ಬಹುಭಾಷಾ ನಟ?
Linkup
ಮುಂಬಯಿ: ದೇಶದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ವಿರುದ್ಧವಾಗಿ ತೃತೀಯ ರಂಗ ರಚನೆ ಸಾಧ್ಯತೆ ಬಗ್ಗೆ ಚರ್ಚಿಸಲು, ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಧ್ಯಕ್ಷ ಕೆ. ಚಂದ್ರಶೇಖರ್‌ ರಾವ್‌ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಡುವೆ ನಿನ್ನೆ(ಫೆ.20-ಭಾನುವಾರ) ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಇತರ ಗಣ್ಯರೂ ಭಾಗವಹಿಸಿದ್ದರು. ಆದರೆ ಬಹುಭಾಷಾ ನಟ ಹಾಗೂ ಪ್ರಧಾನಿ ಮೋದಿ ಟೀಕಾಕಾರರಲ್ಲಿ ಮುಂಚೂಣಿಯಲ್ಲಿರುವ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದು ಇಡೀ ದೇಶದ ಗಮನ ಸೆಳೆದಿದೆ. ಹೌದು, ಕೆಸಿಆರ್-ಠಾಕ್ರೆ ನಡುವೆ ನಡೆದ ಸಭೆಯಲ್ಲಿ ಪ್ರಕಾಶ್ ರಾಜ್ ಕೂಡ ಭಾಗವಹಿಸಿದ್ದು, ಪ್ರಕಾಶ್ ರಾಜ್ ಮುಂದಿನ ಲೋಕಸಭೆ ಚುನಾವಣೆ ಸಮಯದಲ್ಲಿ ರಾಜಕೀಯ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಕಾಶ್ ರಾಜ್ ಕೆಸಿಆರ್ ನೇತೃತ್ವದ ಟಿಆರ್‌ಎಸ್ ಪಕ್ಷವನ್ನು ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪ್ರಕಾಶ್ ರಾಜ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಕೈ ಹಿಡಿದು ಪ್ರಕಾಶ್ ರಾಜ್ ಅವರು ನಿಂತಿದ್ದು ಕಂಡುಬಂದಿತು. ಈ ಸಭೆ ಆಯೋಜನೆಯಲ್ಲಿ ಮತ್ತು ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರಕಾಶ್ ರಾಜ್ ಪಾತ್ರವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಪ್ರಕಾಶ್ ರಾಜ್ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಕಾಂಗ್ರೆಸ್ ವಿರೋಧಿ ಬಣ ರಚನೆಯಲ್ಲಿ ಮಾತ್ರ ತಮ್ಮ ಪಾತ್ರವಹಿಸುತ್ತಿದ್ದು, ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿರುವ ಪ್ರಕಾಶ್ ರಾಜ್, ಬಲಪಂಥೀಯ ರಾಜಕಾರಣವನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿದ್ದಾರೆ.