ಅಪಘಾತದತ್ತ ಮಹಾರಾಷ್ಟ್ರ ಅಘಾಡಿ ಮೈತ್ರಿಕೂಟ? ನಾಯಕರಿಂದ ದಿನಕ್ಕೊಂದು ಹೇಳಿಕೆ

ಮಹಾರಾಷ್ಟ್ರದ ಆಡಳಿತರೂಢ ಮೂರು ಪಕ್ಷಗಳ 'ಮಹಾವಿಕಾಸ ಆಘಾಡಿ' ಮೈತ್ರಿಕೂಟದಲ್ಲಿ ಕಾಣಿಸಿರುವ ಭಿನ್ನಾಭಿಪ್ರಾಯದ ಬಿರುಕು ಮತ್ತಷ್ಟು ಹೆಚ್ಚಿದೆ. ಪರಸ್ಪರ ಕಾಲೆಳೆಯುವ ಕಾಯಕವನ್ನು ಮೈತ್ರಿ ಸರಕಾರದ ನಾಯಕರು ಮುಂದುವರಿಸಿದ್ದಾರೆ.

ಅಪಘಾತದತ್ತ ಮಹಾರಾಷ್ಟ್ರ ಅಘಾಡಿ ಮೈತ್ರಿಕೂಟ? ನಾಯಕರಿಂದ ದಿನಕ್ಕೊಂದು ಹೇಳಿಕೆ
Linkup
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ 'ಮಹಾವಿಕಾಸ ಆಘಾಡಿ' ಸರಕಾರದಲ್ಲಿ ಕಾಣಿಸಿರುವ ಭಿನ್ನಾಭಿಪ್ರಾಯದ ಬಿರುಕು ಮತ್ತಷ್ಟು ಹೆಚ್ಚಿದೆ. ಪರಸ್ಪರ ಕಾಲೆಳೆಯುವ ಕಾಯಕವನ್ನು ಮೈತ್ರಿ ಸರಕಾರದ ನಾಯಕರು ಮುಂದುವರಿಸಿದ್ದಾರೆ. ಸರಕಾರದ ಪಡಸಾಲೆಯಲ್ಲಿ'ಬೆಕ್ಕು ಮತ್ತು ಇಲಿ'ಯ ಕಣ್ಣಾಮುಚ್ಚಾಲೆ ನಡೆದಿದ್ದು, ರಾಜ್ಯ ರಾಜಕಾರಣವು ಯಾವುದೇ ಘಳಿಗೆ ಹೊಸ ಮಗ್ಗಲಿಗೆ ವಾಲಬಹುದು ಎನ್ನುವ ಸನ್ನಿವೇಶ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿರುವ ಶಿವಸೇನೆ ಸೂತ್ರದಾರನ ಸ್ಥಾನದಲ್ಲಿದೆ. ಎರಡನೇ ಅತಿ ಹೆಚ್ಚು ಸದಸ್ಯ ಬಲ ಹೊಂದಿರುವ ಎನ್‌ಸಿಪಿ ನಿರ್ಣಾಯಕ ಎನಿಸಿದೆ. ಕೊರತೆಯ ಕೆಲವು ಸ್ಥಾನಗಳನ್ನು ಮಾತ್ರ ತುಂಬಿರುವ ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನಿಸಿದೆ. ಆದರೆ ಮೂರೂ ಪಕ್ಷಗಳು ತಮ್ಮ ಪ್ರಾಬಲ್ಯ ಕಾಯ್ದುಕೊಳ್ಳಲು, ಭವಿಷ್ಯದ ಸ್ಥಿರತೆ ಕಂಡುಕೊಳ್ಳಲು ತೆರೆಮರೆಯ ಸಮರ ಶುರು ಮಾಡಿವೆ. ಕಡೆಗಣನೆಯ ಕೀಳರಿಮೆಯಿಂದ ಬಳಲುತ್ತಿರುವ ಕಾಂಗ್ರೆಸ್‌ ಮೊದಲು, ''ಮುಂದಿನ ವಿಧಾನಸಭೆ ಚುನಾವಣೆಯನ್ನು ನಾವು ಏಕಾಂಗಿಯಾಗಿ ಎದುರಿಸುತ್ತೇವೆ,'' ಎಂದು ಹೇಳುವ ಮೂಲಕ ಜೇನುಗೂಡಿಗೆ ಕಲ್ಲೆಸೆಯಿತು. ಅದರ ಬೆನ್ನ ಹಿಂದೆಯೇ ಶಿವಸೇನೆ ವರಿಷ್ಠ ಹಾಗೂ ರಾಜ್ಯದ ಸಿಎಂ ಅವರು ರಾಜ್ಯಕ್ಕೆ ಪರಿಹಾರದ ಹಣ ಕೇಳುವ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, 'ಖಾಸಗಿ' ಮಾತುಕತೆ ನಡೆಸಿದರು. ''ಪ್ರಧಾನಿ ಮೋದಿ ಅವರು ನಮಗೆ ಆಪ್ತರು,'' ಎಂದು ಹೇಳಿಕೊಂಡು ಟಾಂಗ್‌ ನೀಡಿದರು. ಅಲ್ಲಿಂದ ಶುರುವಾದ ಮೈತ್ರಿ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ರಾಜಕೀಯ ವೈರಿಗಳುಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ವಿರುದ್ಧ ಕಠೋರ ಹೇಳಿಕೆ ನೀಡಿದ್ದಾರೆ. ''ಸದ್ಯ ಮೈತ್ರಿ ಮಾಡಿಕೊಂಡಿದ್ದರೂ ಎನ್‌ಸಿಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ನಮಗೆ ರಾಜಕೀಯ ಸಮಾನ ವೈರಿಗಳು,'' ಎಂದು ಹೇಳಿದ್ದಾರೆ. ಇದೇ ವೇಳೆ, ಪುಣೆ ಉಸ್ತುವಾರಿ ಸಚಿವ ಅಜಿತ್‌ ಪವಾರ್‌ ಬದಲಾವಣೆ ಬಗ್ಗೆ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಳೆ ಹಕ್ಕೊತ್ತಾಯ ಮಾಡಿದ್ದು, ಪವಾರ್‌ ಅವರನ್ನು ಕೆರಳಿಸಿದೆ. ''ಪಟೋಳೆ ಒಬ್ಬ ಸಣ್ಣ ಮನುಷ್ಯ. ಆತನ ಹೇಳಿಕೆಗೆ ಬೆಲೆಕೊಡುವ ಅಗತ್ಯ ಇಲ್ಲ,'' ಎಂದು ಗುಡುಗಿದ್ದಾರೆ. ಇದಕ್ಕೆ ಬೇರೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರುವ ಪಟೋಳೆ, ''ಯಾರು ಏನೇ ಹೇಳಿಕೆ ನೀಡಿದರೂ ಮೈತ್ರಿ ಸರಕಾರದ ರಿಮೋಟ್‌ ಕೈಯಲ್ಲಿದೆ. ನಾವು ಯಾವುದೇ ದೊಡ್ಡ ನಾಯಕನ ವಿರುದ್ಧ ಈಗ ಮಾತಾಡುವುದಿಲ್ಲ. ಆದರೆ ಅವರು ವಿವೇಚನೆ ಇಲ್ಲದೆ ಹೇಳಿಕೆ ನೀಡುವ ಮೊದಲು ತಮ್ಮ ಪಕ್ಷದ ಸ್ಥಾನಮಾನವನ್ನೊಮ್ಮೆ ನೋಡಿಕೊಳ್ಳಬೇಕು,'' ಎಂದು ಪವಾರ್‌ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಮೈತ್ರಿ ಕೂಟದ ಮೂರೂ ಪಕ್ಷಗಳು ಮುಂದಿನ ನವೆಂಬರ್‌ನಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸೆಣಸಲು ಕತ್ತಿ ವರಸೆ ನಡೆಸಿರುವುದು ಸ್ಪಷ್ಟ. ಠಾಕ್ರೆ, ಪವಾರ್‌, ಪಟೋಳೆ ಹೇಳಿಕೆಗಳನ್ನು ಗಮನಿಸಿದರೆ ಈ ಸರಕಾರ ಇನ್ನು ಆರು ತಿಂಗಳು ಉಳಿದರೆ ಹೆಚ್ಚು ,'' ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸಿದ್ದಾರೆ.