Bangalore Car Bike Accident: ಬೆಂಗಳೂರಿನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಯುವಕ-ಯುವತಿ

Electronic City Car Bike Accident: ಬೆಂಗಳೂರಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಯುವಕ-ಯುವತಿಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಫ್ಲೈಓವರ್‌ನಲ್ಲಿ ಬೈಕಿ ನಿಲ್ಲಿಸಿ ಬದಿಯಲ್ಲಿ ನಿಂತು ಮಾತನಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು 40 ಅಡಿ ಆಳಕ್ಕೆ ಉರುಳಿ ಬಿದ್ದಿದ್ದಾರೆ.

Bangalore Car Bike Accident: ಬೆಂಗಳೂರಿನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಯುವಕ-ಯುವತಿ
Linkup
ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಮೇಲ್ಸೇತುವೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 40 ಅಡಿ ಎತ್ತರದಿಂದ ಸವೀರ್ಸ್‌ ರಸ್ತೆ ಮೇಲೆ ಬಿದ್ದ ಇಬ್ಬರ ದೇಹಗಳು ಒಮ್ಮೆ ಪುಟಿದು 40 ಮೀಟರ್‌ ದೂರ ಉರುಳಿಕೊಂಡು ಹೋಗಿವೆ! ಮಂಗಳವಾರ ರಾತ್ರಿ 9.15ರ ಸುಮಾರಿಗೆ ಸಂಭವಿಸಿರುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರೀತಂಕುಮಾರ್‌ ಹಾಗೂ ಕೃತಿಕಾ ರಾಮನ್‌, ಲೇ ಬೇಯಲ್ಲಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಸುಮಾರು 40 ಅಡಿ ಎತ್ತರದಿಂದ ಸರ್ವಿಸ್‌ ರಸ್ತೆ ಮೇಲೆ ಬಿದ್ದ ದೇಹಗಳು ಒಮ್ಮೆ ಪುಟಿದು 40 ಮೀಟರ್‌ ದೂರ ಉರುಳಿಕೊಂಡು ಹೋಗುತ್ತವೆ. ಇದನ್ನು ಕಂಡು ಪಾದಚಾರಿಯೊಬ್ಬರು ಹೌಹಾರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ಅಜಾರೂಕತೆ! ಈ ನಡುವೆ, ಅಪಘಾತಕ್ಕೆ ಕಾರು ಚಾಲಕ ಪಿ.ನಿತೀಶ್‌ (23) ಅಜಾಗರೂಕತೆಯೇ ಕಾರಣ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಬೊಮ್ಮಸಂದ್ರ ತಿರುಪಾಳ್ಯ ಗ್ರಾಮದ ನಿತೀಶ್‌, ಸಿಲ್ಕ್‌ ಬೋರ್ಡ್‌ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿಯತ್ತ ಬಲೆನೊ ಕಾರಿನಲ್ಲಿ ಅತಿ ವೇಗವಾಗಿ ಹೊರಟಿದ್ದ. ಆತನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆ ಭೇದಿಸಿಕೊಂಡು ಪಕ್ಕದ ವಾಹನ ನಿಲುಗಡೆ ಸ್ಥಳದಲ್ಲಿ (ಲೇ ಬೇ) ನಿಂತಿದ್ದ ಪ್ರೀತಂಕುಮಾರ್‌ (30) ಹಾಗೂ ಕೃತಿಕಾ ರಾಮನ್‌ (28) ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕೆಳಗಿನ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಜೆ.ಪಿ.ನಗರದ 8ನೇ ಹಂತದಲ್ಲಿರುವ ಅಕ್ಷಯ್‌ ಪ್ರೈಡ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಪ್ರೀತಂ, ಸರ್ಜಾಪುರ ರಸ್ತೆಯಲ್ಲಿರುವ ನೊವೋಪೇ ಕಂಪನಿಯಲ್ಲಿ ಕ್ವಾಲಿಟಿ ಕಂಟ್ರೋಲ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಚೆನ್ನೈ ಮೂಲದ ಕೃತಿಕಾ ಮಹದೇವಪುರದಲ್ಲಿರುವ ಕಾಯಿನ್‌ ಸ್ವಿಚ್‌ ಕಂಪನಿಯಲ್ಲಿ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 'ಆರೋಪಿ ನಿತೀಶ್‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನನ್ನು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ಞೆ ಬಂದ ಬಳಿಕ ಆತನಿಂದ ಘಟನೆ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ'' ಎಂದು ಪೊಲೀಸರು ತಿಳಿಸಿದ್ದಾರೆ. ''ಕಾರು ಚಾಲಕನ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆತ ಮದ್ಯಪಾನ ಮಾಡಿದ್ದನೋ ಅಥವಾ ಡ್ರಗ್ಸ್‌ ಸೇವಿಸಿದ್ದನೋ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ. ಪ್ರೀತಂ ಮತ್ತು ಕೃತಿಕಾ ಸ್ನೇಹಿತನ ಬೈಕ್‌ ಪಡೆದು ನಗರದಲ್ಲಿ ಸುತ್ತಾಡಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.