'2 ಕೋಟಿ ಜನರ ಜೀವ ಉಳಿಸಲು ಹೋರಾಡಿದ್ದೇ ನಾನು ಮಾಡಿದ ಅಪರಾಧ': ಆಕ್ಸಿಜನ್ ಆಡಿಟ್ ವರದಿ ಕುರಿತು ಕೇಜ್ರಿವಾಲ್ ಬೇಸರ

ಕೋವಿಡ್ ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅಗತ್ಯಕ್ಕಿಂತಲೂ ಅಧಿಕ ಉತ್ಪ್ರೇಕ್ಷಿತ ಆಕ್ಸಿಜನ್ ಬೇಡಿಕೆಯನ್ನು ಇರಿಸಿತ್ತು ಎಂಬ ತಮ್ಮ ಸರಕಾರದ ವಿರುದ್ಧದ ಸುಪ್ರೀಂಕೋರ್ಟ್ ಸಮಿತಿ ವರದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

'2 ಕೋಟಿ ಜನರ ಜೀವ ಉಳಿಸಲು ಹೋರಾಡಿದ್ದೇ ನಾನು ಮಾಡಿದ ಅಪರಾಧ': ಆಕ್ಸಿಜನ್ ಆಡಿಟ್ ವರದಿ ಕುರಿತು ಕೇಜ್ರಿವಾಲ್ ಬೇಸರ
Linkup
ಹೊಸದಿಲ್ಲಿ: ಎರಡನೇ ಅಲೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ತಮಗೆ ಸಾಕಷ್ಟು ಸಿಗುತ್ತಿಲ್ಲ ಎಂದು ಕಾನೂನು ಸಮರವನ್ನೂ ನಡೆಸಿ ಹೆಚ್ಚಿನ ಆಕ್ಸಿಜನ್ ತರಿಸಿಕೊಂಡಿದ್ದ ಮುಖ್ಯಮಂತ್ರಿ, ಈಗ ವಿರೋಧಪಕ್ಷಗಳ ವಾಗ್ದಾಳಿಗೆ ತುತ್ತಾಗಿದ್ದಾರೆ. ನೇಮಿಸಿದ ಸಮಿತಿಯು ನಡೆಸಿದ ಅಧ್ಯಯನದಲ್ಲಿ ದಿಲ್ಲಿಯ ವಾಸ್ತವ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಕ್ಸಿಜನ್ ಅನ್ನು ತರಿಸಿಕೊಳ್ಳಲಾಗಿತ್ತು. ಇದರಿಂದ ನಿಜಕ್ಕೂ ಅಧಿಕ ಆಕ್ಸಿಜನ್ ಅಗತ್ಯವಿದ್ದ ರಾಜ್ಯಗಳಿಗೆ ಅಭಾವ ಉಂಟಾಗಿತ್ತು ಎನ್ನುವುದು ಬಹಿರಂಗವಾಗಿದೆ. ಈ ಆಡಿಟ್ ತಂಡದ ವರದಿ ಬಹಿರಂಗವಾದ ಬೆನ್ನಲ್ಲೇ ದಿಲ್ಲಿಯ ಆಡಳಿತಾರೂಢ ಎಎಪಿ ಹಾಗೂ ಬಿಜೆಪಿ ಪಕ್ಷಗಳ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ. 'ಕೋವಿಡ್ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಮತ್ತು ದಿಲ್ಲಿ ಸರಕಾರ ಆಕ್ಸಿಜನ್ ಪೂರೈಕೆಯನ್ನು ರಾಜಕೀಯಗೊಳಿಸಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಂತಹ ಕ್ಷುಲ್ಲಕ ರಾಜಕಾರಣ. ಆಕ್ಸಿಜನ್ ಲೆಕ್ಕಪರಿಶೋಧನಾ ಸಮಿತಿಯು ತನ್ನ ವರದಿಯಲ್ಲಿ ನೀಡಿರುವ ದಾಖಲೆಗಳು ಆಘಾತಕಾರಿಯಾಗಿದೆ' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕಿಡಿಕಾರಿದ್ದಾರೆ. 'ಉತ್ಪ್ರೇಕ್ಷಿತ ಆಕ್ಸಿಜನ್ ಅಗತ್ಯ' ಕುರಿತಾದ ವರದಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, 'ನನ್ನ ಅಪರಾಧವೆಂದರೆ ದಿಲ್ಲಿಯ ಎರಡು ಕೋಟಿ ಜನರ ಜೀವಕ್ಕಾಗಿ ಹೋರಾಡಿದ್ದು' ಎಂದಿದ್ದಾರೆ. 'ನೀವು ಚುನಾವಣಾ ಪ್ರಚಾರಗಳನ್ನು ನಡೆಸುವಾಗ ನಾನು ಆಕ್ಸಿಜನ್ ವ್ಯವಸ್ಥೆ ಮಾಡಲು ರಾತ್ರಿಯಿಡೀ ಎಚ್ಚರವಿದ್ದು ಕೆಲಸ ಮಾಡುತ್ತಿದ್ದೆ. ಜನರಿಗೆ ಆಕ್ಸಿಜನ್ ಸಿಗಬೇಕೆಂದು ಹೋರಾಡಿದೆ, ಮನವಿ ಮಾಡಿದ್ದೆ. ಜನರು ಆಕ್ಸಿಜನ್ ಕೊರತೆಯಿಂದ ತಮ್ಮ ಪ್ರೀತಿಪಾತ್ರದ ಜೀವಗಳನ್ನು ಕಳೆದುಕೊಂಡಿದ್ದಾರೆ. ಅವರನ್ನು ಸುಳ್ಳುಗಾರರು ಎಂದು ಕರೆಯಬೇಡಿ.ಅವರಿಗೆ ನೋವಾಗುತ್ತದೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.