ಹಾಲಿನ ದರ ಇಳಿಕೆಯಿಂದ ಹೈನುಗಾರರಿಗೆ ಕಷ್ಟವಾದ ಪಶುಸಂಗೋಪನೆ!

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರನ್ನು ಹೈನೋದ್ಯಮ ಕೈಹಿಡಿದಿದೆ. ಆದರೆ, ಪ್ರಸ್ತುತ ಹಾಲಿನ ದರ ಕುಸಿತ ಕಂಡಿರುವುದು, ಪಶು ಆಹಾರ ದುಬಾರಿಯಾಗಿರುವುದು ಸೇರಿದಂತೆ ನಾನಾ ಕಾರಣಗಳಿಂದ ಹೈನುಗಾರರು ಪರ್ಯಾಯ ಕಾಯಕದಲ್ಲಿ ತೊಡಗಿಸಿಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ.

ಹಾಲಿನ ದರ ಇಳಿಕೆಯಿಂದ ಹೈನುಗಾರರಿಗೆ ಕಷ್ಟವಾದ ಪಶುಸಂಗೋಪನೆ!
Linkup
ಕೆಂಪೇಗೌಡ ಎನ್‌ ವೆಂಕಟೇನಹಳ್ಳಿ ಚಿಕ್ಕಬಳ್ಳಾಪುರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರನ್ನು ಹೈನೋದ್ಯಮ ಕೈಹಿಡಿದಿದೆ. ಆದರೆ, ಪ್ರಸ್ತುತ ಕುಸಿತ ಕಂಡಿರುವುದು, ಪಶು ಆಹಾರ ದುಬಾರಿಯಾಗಿರುವುದು ಸೇರಿದಂತೆ ನಾನಾ ಕಾರಣಗಳಿಂದ ಹೈನುಗಾರರು ಪರ್ಯಾಯ ಕಾಯಕದಲ್ಲಿ ತೊಡಗಿಸಿಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಜಿಲ್ಲೆಯಲ್ಲಿಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಳ್ಳೆಯ ಆದಾಯ ನೀರಿಕ್ಷಿಸುತ್ತಿದ್ದ ಹೈನುಗಾರರು ಈಗ ನಷ್ಟಕ್ಕೆ ಸಿಲುಕಿದ್ದಾರೆ. ಇದರಿಂತ ಬೇಸತ್ತ ಹೈನುಗಾರರು ಉತ್ತಮ ಆದಾಯ ಗಳಿಸಲು ದಿನಗೂಲಿ, ಇನ್ನಿತರ ಕಾಯಕಗಳತ್ತ ಮುಖ ಮಾಡಿದ್ದಾರೆ. ಹಾಲಿನ ದರ ಕುಸಿತ: ಪಶುಗಳನ್ನು ಸಾಕಿ ಹಾಲು ಉತ್ಪಾದಿಸುವ ಹೈನುಗಾರರಿಗೆ ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ. ಪ್ರಸ್ತುತ 1 ಲೀಟರ್‌ ಹಾಲಿನ ದರ 24 ರೂ. ಇದೆ. ಡೇರಿಯಲ್ಲಿಫ್ಯಾಟ್‌, ಎಸ್‌ಎನ್‌ಎಫ್‌ ಪರೀಕ್ಷೆಗಳಿಂದ ಪ್ರತಿ ಲೀಟರ್‌ ಹಾಲಿಗೆ 18 ರೂ.ನಿಂದ 24 ರೂ. ತನಕ ಬಹುತೇಕ ಹೈನುಗಾರರು ಪಡೆಯುತ್ತಿದ್ದಾರೆ. ಹಾಲಿನ ದರ ಇಷ್ಟು ಕಡಿಮೆ ಆಗಿರುವ ಪರಿಣಾಮ ಹೈನುಗಾರ ಪಶು ಸಾಕಲು ಹಿಂದೇಟು ಹಾಕುತ್ತಿದ್ದಾನೆ. ದುಬಾರಿ ಪಶು ಆಹಾರ: ಬರೀ ಹಾಲಿನ ದರ ಇಳಿಕೆಯೇ ಪಶುಪಾಲನೆಗೆ ಕಂಟಕವಾಗಿಲ್ಲ, ಇದರ ಜತೆಗೆ ದುಬಾರಿಯಾಗಿರುವ ಪಶು ಆಹಾರಕ್ಕೆ ಅಧಿಕ ಬಂಡವಾಳ ತಗುಲುತ್ತಿದೆ. ಇದರಿಂದ ಹೈನುಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ, ಪರ್ಯಾಯ ಕೆಲಸಗಳ ಹುಡುಕಾಟ ಆರಂಭಿಸಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಪಶುಆಹಾರ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿಸಂಗ್ರಹಿಸಿಟ್ಟಿರುವ ಹಿಂಡಿ, ಬೂಸಾ, ಫೀಡ್‌ಗಳನ್ನು ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದರೂ, ಪಶುಪಾಲನೆ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದಿರುವುದು ಹೈನುಗಾರರ ಸಂಕಷ್ಟಕ್ಕೆ ಕಾರಣವಾಗಿದೆ. ಎಂಆರ್‌ಪಿಗಿಂತ ಹೆಚ್ಚಿಗೆ ಮಾರಾಟ: ಜಿಲ್ಲೆಯಲ್ಲಿಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಪಶುಆಹಾರ ಮಾರುತ್ತಿರುವುದರಿಂದ ಹೈನುಗಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಅಂಗಡಿ ಮಾಲೀಕರು ಸರಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಎಷ್ಟಿದೆ ಬೆಲೆ: ಮಾರುಕಟ್ಟೆಯಲ್ಲಿ ಪಶು ಆಹಾರ ಹಿಂಡಿ ಮೂಟೆ 1,500 ರೂ., 48 ಕೆಜಿ ಬೂಸಾ ಮೂಟೆ 1,150 ರೂ. ಇದ್ದರೆ ಫೀಡ್‌ ಮೂಟೆ 970 ರೂ.ಗೆ ಏರಿಕೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಪಶು ಆಹಾರದಲ್ಲಿ 100-200 ರೂ. ಏರಿಕೆ ಕಾಣುತ್ತಿದ್ದು, ದುಬಾರಿ ಪಶು ಆಹಾರಕ್ಕೆ ಹಾಕಿದ ಬಂಡವಾಳ ಹೈನುಗಾರನ ಜೇಬಿಗೆ ಸೇರದಂತಾಗಿದೆ. ಒಣ ಹುಲ್ಲು ದುಬಾರಿ: ಹೈನುಗಾರರಿಗೆ ಬೇಸಿಗೆಯಲ್ಲಿ ಹಸಿ ಮೇವಿನ ಕೊರತೆ ಉಂಟಾಗಲಿದೆ. ಪಶುಗಳಿಗೆ ಒಣ ಹುಲ್ಲು ಆಧಾರವಾಗಲಿದೆ. ಹಾಗಾಗಿ ಮುಂದಿನ ಬೇಸಿಗೆಗೆ ಈಗಲೇ ಒಣಹುಲ್ಲು ಖರೀದಿಸಿ ಸಂಗ್ರಹಿಸಿಟ್ಟರೆ ಮುಂದಿನ ದಿನಗಳಲ್ಲಿ ಪಶು ಸಾಕಾಣಿಕೆಗೆ ಅನುಕೂಲವಾಗಲಿದೆ. ಆದರೆ, ಈ ಬಾರಿ ಮಳೆ ಹೆಚ್ಚಾದ್ದರಿಂದ ರಾಗಿ ಬೆಳೆ ಹಾಳಾಗಿ ಒಣ ಹುಲ್ಲು ಹೆಚ್ಚಾಗಿ ಸಿಗುತ್ತಿಲ್ಲ. ಹೀಗಾಗಿ ಒಣಹುಲ್ಲಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದರವೂ ಹೆಚ್ಚಾಗಿದೆ. ಕಳೆದ ವರ್ಷ ಒಂದು ಟ್ರ್ಯಾಕ್ಟರ್‌ ಲೋಡ್‌ ಒಣ ಹುಲ್ಲು 10-12 ಸಾವಿರ ರೂ. ವರೆಗೆ ಮಾರಾಟವಾಗಿತ್ತು. ಈ ಬಾರಿ ಅಷ್ಟು ಬೆಲೆಗೆ ಯಾರೂ ನೀಡುತ್ತಿಲ್ಲ. ಇದು ಸಹ ಹೈನುಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅನ್ಯ ಕೆಲಸಗಳತ್ತ ಮೊರೆ ಹೈನುಗಾರರು ಎಷ್ಟೇ ದುಡಿಮೆ ಮಾಡಿ ಹಾಲು ಉತ್ಪಾದಿಸಿ ಡೇರಿಗೆ ನೀಡಿದರೂ 15 ದಿನಗಳಿಗೊಮ್ಮೆ ಬರುವ ಬಟವಾಡೆ ಸಾಲುತ್ತಿಲ್ಲ. ಹಾಲಿನ ದರ ಕುಸಿತ, ದುಬಾರಿ ಪಶು ಆಹಾರ ಸೇರಿದಂತೆ ಹಲವು ಕಾರಣಗಳಿಂದ ಕಂಗೆಟ್ಟಿರುವ ಹೈನುಗಾರರು, ಹೈನೋದ್ಯಮ ತೊರೆದು ಅನ್ಯ ಕೆಲಸಗಳತ್ತ ಮೊರೆ ಹೋಗುತ್ತಿದ್ದಾರೆ. ಬೆಳಿಗಿನ ಜಾವ ಪಶು ಆರೈಕೆಯ ಬದಲಿಗೆ ಹೂ ತೋಟಗಳಲ್ಲಿ ಹೂ ಕಿತ್ತು ಕೈತುಂಬಾ ಸಂಪಾದಿಸುತ್ತಿದ್ದಾರೆ. ದಿನಗೂಲಿಗೆ ಹೋದರೆ ನಿತ್ಯ 500-1,000 ರೂ. ಸಂಪಾದನೆ ಮಾಡುತ್ತಿದ್ದಾರೆ. ಲೀಟರ್‌ ಹಾಲಿಗೆ 40 ರೂ.ಗೆ ಆಗ್ರಹ ಜಿಲ್ಲೆಯಲ್ಲಿ ಹೈನೋದ್ಯಮ ಉಳಿಸಲು ಕೋಚಿಮುಲ್‌ ಒಕ್ಕೂಟ ಹಾಗೂ ಸರಕಾರ ಮುಂದಾಗಬೇಕು. ದುಬಾರಿಯಾಗಿರುವ ಮೇವು, ಪಶು ಆಹಾರಕ್ಕೆ ಪ್ರತಿ ಲೀಟರ್‌ ಹಾಲಿಗೆ ಒಕ್ಕೂಟ ಹಾಗೂ ಸರಕಾರ 40 ರೂ. ನಿಗದಿಪಡಿಸಬೇಕೆಂದು ಹೈನುಗಾರರು ಆಗ್ರಹಿಸಿದ್ದಾರೆ. ಹಾಲಿನ ದರ ಇಳಿಕೆ, ದುಬಾರಿ ಪಶು ಆಹಾರ, ಗೋಹತ್ಯೆ ನಿಷೇಧ ಕಾಯಿದೆ ಜಾರಿಯಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈನೋದ್ಯಮ ಉಳಿಯಬೇಕಾದರೆ ಹಾಲಿನ ದರ 40 ರೂ.ವರೆಗೆ ಹೆಚ್ಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಶು ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಲಿದೆ. - ಬಿ.ಎನ್‌. ಮುನಿಕೃಷ್ಣಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಶು ಸಾಕಾಣಿಕೆಗೆ ತಗಲುತ್ತಿರುವ ವೆಚ್ಚ ದುಬಾರಿಯಾಗಿದೆ. ಹಾಲಿನ ದರ ಕಡಿಮೆಯಾಗಿರುವುದರಿಂದ ಇದ್ದ 4 ಹಸುಗಳನ್ನು ಮಾರಿ, ಅದರಿಂದ ಬಂದ ಹಣವನ್ನು ಮನೆ ಮುಂದೆ ಒಂದು ಎಕರೆ ರೋಜಾ ಹಾಕಿ ಒಳ್ಳೆಯ ಆದಾಯ ಗಳಿಸುತ್ತಿದ್ದೇನೆ. - ಶ್ರೀನಿವಾಸ್‌, ರೈತ, ನಂದಿ