ಸತತ 2 ತಿಂಗಳಿಂದ ಕಾಫಿಗೆ ಉತ್ತಮ ಧಾರಣೆ! ಕಾಫಿ ತೋಟದ ಕಾರ್ಮಿಕರಿಗೂ ಬಂಪರ್‌ ಆದಾಯ!

ಜಿಲ್ಲೆಯ ಕಾಫಿಬೆಳೆಗಾರರಿಗೆ ಈ ವರ್ಷ ಶುಕ್ರದೆಸೆ ಖುಲಾಯಿಸಿದೆ. ಕಳೆದ ಎರಡು ತಿಂಗಳಿಂದ ಕಾಫಿಗೆ ಉತ್ತಮ ಧಾರಣೆ ಇದೆ.ಇದರಿಂದ ಮಾಲೀಕರ ಜತೆ ಕಾರ್ಮಿಕರಿಗೂ ಕೂಡ ಬಂಪರ್‌ಕೂಲಿ ದೊರೆಯುವಂತಾಗಿದೆ.

ಸತತ 2 ತಿಂಗಳಿಂದ ಕಾಫಿಗೆ ಉತ್ತಮ ಧಾರಣೆ! ಕಾಫಿ ತೋಟದ ಕಾರ್ಮಿಕರಿಗೂ ಬಂಪರ್‌ ಆದಾಯ!
Linkup
ಕೆ.ಎಚ್‌.ರುದ್ರಯ್ಯ,ಚಿಕ್ಕಮಗಳೂರು ಜಿಲ್ಲೆಯ ಕಾಫಿಬೆಳೆಗಾರರಿಗೆ ಈ ವರ್ಷ ಶುಕ್ರದೆಸೆ ಖುಲಾಯಿಸಿದೆ. ಕಳೆದ ಎರಡು ತಿಂಗಳಿಂದ ಕಾಫಿಗೆ ಉತ್ತಮ ಧಾರಣೆ ಇದೆ.ಇದರಿಂದ ಮಾಲೀಕರ ಜತೆ ಕಾರ್ಮಿಕರಿಗೂ ಕೂಡ ಬಂಪರ್‌ಕೂಲಿ ದೊರೆಯುವಂತಾಗಿದೆ. ಚಿಕ್ಕಮಗಳೂರು ಭೌಗೋಳಿಕವಾಗಿ ಮಲೆನಾಡು ಮತ್ತು ಬಯಲು ಪ್ರದೇಶ ಹೊಂದಿದೆ. ಬಯಲು ಭಾಗದಲ್ಲಿ ತೆಂಗು, ಅಡಕೆ ಮತ್ತು ತರಕಾರಿ ಬೆಳೆದರೆ ಮಲೆನಾಡಿನ ಮೂರ್ನಾಲ್ಕು ತಾಲೂಕುಗಳಲ್ಲಿ ಕಾಫಿಯೇ ಪ್ರಧಾನ ಬೆಳೆ. ಹವಾಮಾನ ವೈಪರೀತ್ಯ, ಕಾಂಡ ಕೊರಕ ಬಾಧೆ, ಧಾರಣೆ ಕುಸಿತ, ಇಳುವರಿ ಕುಂಠಿತ ಮತ್ತಿತರೆ ಅನೇಕ ಕಾರಣದಿಂದ ಕಳೆದ 10-15 ವರ್ಷದಿಂದ ಬೆಳೆಗಾರರು ನಷ್ಟದಿಂದ ಕಂಗಾಲಾಗಿದ್ದರು. ಎಷ್ಟೋ ಮಂದಿ ಸಾಲಬಾಧೆಯಿಂದ ತೋಟಗಳನ್ನು ಮಾರಾಟ ಮಾಡಿದ್ದರು. ಕೆಲವು ತೋಟಗಳು ಡಿಆರ್‌ಟಿ, ಸರ್ಫೆಸಿ ಒಳಗೆ ಸಿಲುಕಿಕೊಂಡಿವೆ. ಈ ಬಾರಿ ಹೇಳಿಕೊಳ್ಳುವಷ್ಟು ಇಲ್ಲದಿದ್ದರೂ ಕಾಫಿ ಉತ್ಪಾದನಾ ವೆಚ್ಚ ಮತ್ತು ಧಾರಣೆಗೂ ಸರಿದೂಗುವಂತಹ ಬೆಲೆ ಬಂದಿದೆ. ಆದರೆ ಇಳುವರಿ ಇಲ್ಲ. 50 ಕಿಲೋ ಅರೆಬಿಕಾ ಪಾರ್ಚ್ಮೆಂಟ್‌ ಗೆ 15650 ರೂ ಧಾರಣೆ ಇದೆ. ಇದು ಕಳೆದ 2 ತಿಂಗಳಿಂದ ಸ್ಥಿರವಾಗಿದ್ದು ಬೆಳೆಗಾರ ಮತ್ತು ಕೂಲಿ ಕಾರ್ಮಿಕ ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಕಾರ್ಮಿಕರಿಗೂ ಬಂಪರ್‌: ಕಾಫಿತೋಟದಲ್ಲಿ ಸಾಮಾನ್ಯವಾಗಿ ವರ್ಷವಿಡಿ ಕೆಲಸವಿರುತ್ತದೆ. ಇತರೆ ಕೆಲಸಗಳಲ್ಲಿ ದಿನವೊಂದಕ್ಕೆ 270 ರಿಂದ 300 ರೂ. ಪಡೆಯುತ್ತಿದ್ದ ಕಾರ್ಮಿಕರು ಕಾಫಿಹಣ್ಣು ಕೊಯ್ಲು ಸೀಸನ್‌ನಲ್ಲಿ ದಿನವೊಂದಕ್ಕೆ 1 ಸಾವಿರ ರೂ.ಗಿಂತ ಹೆಚ್ಚು ದುಡಿಯತ್ತಿದ್ದಾರೆ. ಮಲೆನಾಡಿನಲ್ಲಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದ್ದು ಮಳೆ ಬಂದು ಹಣ್ಣು ನೆಲಕಚ್ಚುತ್ತದೆಎಂಬ ಆತಂಕದಿಂದ ಬೆಳೆಗಾರರು ಮೊದಲು ಕೊಯ್ಲು ಮುಗಿದರೆ ಸಾಕಪ್ಪಾ ಎಂದು ದುಪ್ಪಟ್ಟು ಕೂಲಿ ನೀಡುವ ಅನಿವಾರ್ಯತೆ ಉಂಟಾಗಿದೆ. ಒಂದು ಬೂಸಲ್‌ (32 ಕಿಲೋ) ಹಣ್ಣು ಕೊಯ್ದರೆ 240 ರೂ.ಕೂಲಿ ನೀಡಲಾಗುತ್ತಿದೆ. ಒಂದು ದಿನದಲ್ಲಿ ಕೈಚಳಕವಿರುವ ಕೆಲವು ಕಾರ್ಮಿಕರು 5- 6 ಬೂಸಲ್‌ವರೆಗೂ ಕೊಯ್ಯುವವರಿದ್ದಾರೆ. ಮಲೆನಾಡಿನ ಕೆಲವು ಕಡೆ ಕಿಲೋ ಲೆಕ್ಕದಲ್ಲಿ ಕೊಯ್ಲು ಮಾಡಿಸುತ್ತಾರೆ. ಒಂದು ಕಿಲೋ ಹಣ್ಣಿಗೆ 8- 10 ರೂ. ಕೂಲಿ ನೀಡುತ್ತಾರೆ. ಕನಿಷ್ಠ ಎಂದರೂ 100 ಕಿಲೋ ಹಣ್ಣನ್ನು ಕಾರ್ಮಿಕರು ಕೊಯ್ಯುತ್ತಾರೆ. ಹೀಗಾಗಿ ಹಣ್ಣುಕೊಯ್ಲುಸೀಸನ್‌ ಬಂತೆಂದರೆ ಮಾಲೀಕರಗಷ್ಟೇ ಅಲ್ಲ ಕಾರ್ಮಿಕರಿಗೂ ಬಂಪರ್‌ ಕೂಲಿ ದೊರೆಯುತ್ತದೆ. ಹೀಗಾಗಿ ವಾರದ ರಜೆಯನ್ನು ಲೆಕ್ಕಿಸದೆ ವಾರಪೂರ್ತಿ ಕೆಲಸ ಮಾಡುತ್ತಾರೆ. ಕಾರ್ಮಿಕರ ಪರದಾಟ : ಗರಿಷ್ಠ ಕೂಲಿ ಎಲ್ಲಿ ಸಿಗುತ್ತದಯೊ ಅಲ್ಲಿಗೆ ಮೇಸ್ತ್ರಿಗಳು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದು ಇದರಿಂದ ದೊಡ್ಡ ಕಂಪನಿ ತೋಟಗಳು ಮತ್ತು ನೂರಾರು ಎಕರೆ ಹೊಂದಿರುವ ಬೆಳೆಗಾರರಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಈ ಬಾರಿ ಕೊರೊನಾ ಮಹಾಮಾರಿಯಿಂದ ಉತ್ತರ ಕರ್ನಾಟಕದಿಂದ ವಲಸೆ ಬರುವ ಕಾರ್ಮಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ಕೂಲಿ ಲೈನ್‌ನಲ್ಲಿರುವವರು ಹಾಗೂ ಅಕ್ಕಪಕ್ಕದ ಹಳ್ಳಿಯ ಕಾರ್ಮಿಕರು ಹಣ್ಣು ಕೊಯ್ಲುವಿನಲ್ಲಿ ತೊಡಗಿದ್ದು ವೇತನ ಹೆಚ್ಚು ಸಿಗುವ ಕಡೆ ಕಾರ್ಮಿಕರು ವಾಲುತ್ತಿದ್ದು ಇದು ಸಣ್ಣ ಬೆಳೆಗಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಾಫಿ ಧಾರಣೆ
  • ಅರೆಬಿಕಾ ಪಾರ್ಚ್ಮೆಂಟ್‌ 15650
  • ಅರೆಬಿಕಾ ಚೆರಿ 6925
  • ರೊಬೆಸ್ಟಾ ಪಾರ್ಚ್ಮೆಂಟ್‌ 6850
  • ರೊಬೆಸ್ಟಾ ಚೆರಿ 3825
ಕೆಲವು ಚಾಲಾಕಿ ಮೇಸ್ತ್ರಿಗಳು ಬೂಸಲ್‌ಗೆ 5-10 ರೂ ಹೆಚ್ಚಿರುವ ಕಡೆ ಕಾರ್ಮಿಕರನ್ನು ಕರೆದೊಯ್ದು ಅವರು ಲಾಭ ಮಾಡಿಕೊಳ್ಳುತ್ತಾರೆ. ಹೀಗಾಗಿ ಇಂದು ನಮಗೆ ಬಂದವರು ನಾಳೆ ಚಕ್ಕರ್‌ ಹಾಕಿ ಬೇರೆಯವರಿಗೆ ಹೋಗಿರುತ್ತಾರೆ. ನಮಗಷ್ಟೇ ಅಲ್ಲ. ಇದರಿಂದ ತುಂಬಾ ಜನ ತೊಂದರೆ ಅನುಭವಿಸುವಂತಾಗಿದೆ.ಬೆಳೆಗಾರರು ಒಂದು ನಿಗಧಿತ ಬೆಲೆ ನಿರ್ಧರಿಸಿಕೊಂಡು ಎಲ್ಲರೂ ಅದನ್ನೇ ಪಾಲಿಸಬೇಕು. -ಸುಂದರೇಶ್‌, ಕಾಫಿ ತೋಟ ಮಾಲೀಕರು ಹಳಿಯೂರು