ಬಿಜೆಪಿ ಕೇಂದ್ರ ಕಚೇರಿಯ 42 ಜನರಲ್ಲಿ ಕೋವಿಡ್ ಪಾಸಿಟಿವ್: ಇಡೀ ಕಟ್ಟಡ ಸ್ಯಾನಿಟೈಸ್

ದಿಲ್ಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯ 42 ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಗೂ ಮುನ್ನ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ಸಿಬ್ಬಂದಿಯನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬಿಜೆಪಿ ಕೇಂದ್ರ ಕಚೇರಿಯ 42 ಜನರಲ್ಲಿ ಕೋವಿಡ್ ಪಾಸಿಟಿವ್: ಇಡೀ ಕಟ್ಟಡ ಸ್ಯಾನಿಟೈಸ್
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇರುವ ಬಿಜೆಪಿ ಕೇಂದ್ರ ಕಚೇರಿಯ 42 ಸಿಬ್ಬಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಬಿಜೆಪಿಯ ಕೋರ್ ಸಮಿತಿ ಸಭೆಗೂ ಮುನ್ನ ಸೋಮವಾರ ಇಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 42 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಸೋಂಕು ಪತ್ತೆಯಾದವರ ಪೈಕಿ ಹೆಚ್ಚಿನವರು ಸ್ಯಾನಿಟೈಸೇಷನ್ ಕಾರ್ಯಕ್ಕೆ ನಿಯೋಜಿತರಾದ ಕೆಲಸಗಾರರಾಗಿದ್ದಾರೆ. ಅವರೆಲ್ಲರಿಗೂ ಸ್ವಯಂ ಐಸೋಲೇಟ್ ಆಗಿರುವಂತೆ ಸೂಚಿಸಲಾಗಿದೆ. ದಿಲ್ಲಿಯ ಮಿಂಟೋ ರಸ್ತೆಯಲ್ಲಿರುವ ಕಟ್ಟಡವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ದೊಡ್ಡ ಸಭೆ ನಡೆಸುವ ಮುನ್ನ ಕಚೇರಿಯಲ್ಲಿರುವ ಎಲ್ಲ ಸಿಬ್ಬಂದಿಯನ್ನೂ ಕೋವಿಡ್ ಪರೀಕ್ಷೆ ಒಳಪಡಿಸಬೇಕು ಎಂಬ ಹೊಸ ನಿಯಮವನ್ನು ಬಿಜೆಪಿ ಆರಂಭಿಸಿದೆ. 'ಕಚೇರಿಗೆ ಸಂಬಂಧಿಸಿದಂತೆ ಮಹತ್ವದ ಕೆಲಸ ಇರುವ ವ್ಯಕ್ತಿಗಳು ಮಾತ್ರವೇ ಕೇಂದ್ರ ಕಚೇರಿಗೆ ಬರುತ್ತಾರೆ' ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೋರ್ ಕಮಿಟಿ ಸಭೆ ನಡೆದಿತ್ತು. ಎರಡನೇ ಸುತ್ತಿನ ಸಭೆ ಬುಧವಾರ ನಡೆಯಬೇಕಿದೆ. 'ಬಿಜೆಪಿ ಕೇಂದ್ರ ಕಚೇರಿಯ ಸಿಬ್ಬಂದಿ, ಸ್ವಚ್ಛತೆ ಹಾಗೂ ಸೇವಾ ನೌಕರರು, ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮ ಉಪ ಉಸ್ತುವಾರಿ ಸಂಜಯ್ ಮಾಯುಖ್ ಸೇರಿದಂತೆ ಸುಮಾರು 50 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ' ಎಂದು ವರದಿ ತಿಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಲ್ಲಿ ಸೋಮವಾರ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿತ್ತು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಅಜಯ್ ಭಟ್ ಅವರಲ್ಲಿಯೂ ಸೋಮವಾರ ಕೋವಿಡ್ ದೃಢಪಟ್ಟಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡನೇ ಬಾರಿಗೆ ಕೋವಿಡ್ ಸೋಂಕಿಗೆ ತುತ್ತಾಗಿರುವುದಾಗಿ ಬುಧವಾರ ಮಾಹಿತಿ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದು, ಲಘು ಲಕ್ಷಣಗಳು ಕಂಡುಬಂದಿವೆ ಎಂದು ಬುಧವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿನ ಬಿಜೆಪಿ ಉಸ್ತುವಾರಿಯಾಗಿರುವ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರಲ್ಲಿ ಮಂಗಳವಾರ ಕೋವಿಡ್ ದೃಢಪಟ್ಟಿತ್ತು. ಅದಕ್ಕೂ ಮುನ್ನ ಅವರು ಲಖನೌದಲ್ಲಿ ಸೋಮವಾರ ರಾತ್ರಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ಹಾಜರಿದ್ದರು.