ಪಂಜಾಬ್ ಮುಖ್ಯಮಂತ್ರಿ ಚನ್ನಿ ಸಹೋದರನಿಂದಲೇ ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ತಮ್ಮ ಮನೋಹರ್ ಸಿಂಗ್ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವುದರಿಂದ ಪಕ್ಷಕ್ಕೆ ಸೆಡ್ಡು ಹೊಡೆಯುವ ಮೂಲಕ ಚನ್ನಿ ಹಾಗೂ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚನ್ನಿ ಸಹೋದರನಿಂದಲೇ ಕಾಂಗ್ರೆಸ್‌ಗೆ ಬಂಡಾಯದ ಬಿಸಿ
Linkup
ಚಂಡೀಗಡ: ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಪಕ್ಷಕ್ಕೆ ಬಂಡಾಯದ ಬಿಸಿ ಎದುರಾಗಿದೆ. ಶನಿವಾರವಷ್ಟೇ ಕಾಂಗ್ರೆಸ್ ತನ್ನ 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಅನೇಕ ಪ್ರಮುಖರನ್ನು ಹೆಸರಿಸಿತ್ತು. ಆದರೆ ಬಸ್ಸಿ ಪಠಾಣಾ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಅವರ ತಮ್ಮ ಅವರಿಗೆ ನಿರಾಶೆ ಉಂಟಾಗಿದೆ. ಇದರಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಮನೋಹರ್ ಸಿಂಗ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ಕುಟುಂಬ ಒಂದು ಟಿಕೆಟ್ ಎಂಬ ನಿಯಮವನ್ನು ಕಾಂಗ್ರೆಸ್ ಅಳವಡಿಸಿಕೊಂಡಿರುವುದರಿಂದ ಮನೋಹರ್ ಸಿಂಗ್ ಅವರಿಗೆ ಬಸ್ಸಿ ಪಠಾಣಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿತ್ತು. ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರಿಗೇ ಕಾಂಗ್ರೆಸ್ ಮಣೆ ಹಾಕಿದೆ. ಈ ನಿರ್ಧಾರದ ಬಗ್ಗೆ ಚನ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಸ್ಸಿ ಪಠಾಣಾ ಪಂಜಾಬ್‌ನ ಸಾಂಸ್ಕೃತಿಕ ಪ್ರದೇಶದಲ್ಲಿದ್ದು, ಸಿಎಂ ಚನ್ನಿ ಹಾಗೂ ಅವರ ಸಮುದಾಯದ ಪ್ರಬಲ ನೆಲೆಯಾಗಿದೆ. ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ನಿರ್ಧಾರ ಕ್ಷೇತ್ರದ ಜನತೆಗೆ ಮಾಡಿರುವ 'ಅನ್ಯಾಯ' ಎಂದು ಮನೋಹರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕರು ಅಸಮರ್ಥ ಹಾಗೂ ನಿಷ್ಪ್ರಭಾವಿ ಎಂದು ಟೀಕಿಸಿದ್ದಾರೆ. 'ಬಸ್ಸಿ ಪಠಾಣಾದ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಪಕ್ಷೇತರನಾಗಿ ಸ್ಪರ್ಧಿಸುವಂತೆ ನನಗೆ ಸಲಹೆ ನೀಡಿದ್ದಾರೆ. ಅವರು ಹೇಳಿದ್ದನ್ನು ನಾನು ಮಾಡಲಿದ್ದೇನೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ' ಎಂದು ಅವರು ತಿಳಿಸಿದ್ದಾರೆ. 'ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಮತ್ತು ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿದಿರುವ ಹಾಲಿ ಶಾಸಕನನ್ನು ಸೋಲಿಸುತ್ತೇನೆ' ಎಂದು ಹೇಳಿದ್ದಾರೆ. ಖಾರಾರ್ ಸಿವಿಲ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿದ್ದ ಮನೋಹರ್ ಸಿಂಗ್, ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ನಂತರ ರಾಜಕೀಯ ಪ್ರವೇಶಿಸುವ ಬಯಕೆ ವ್ಯಕ್ತಪಡಿಸಿದ್ದರು. 'ವಿವಿಧ ಕೌನ್ಸಿಲರ್‌ಗಳು, ಗ್ರಾಮದ ಮುಖ್ಯಸ್ಥರು ಹಾಗೂ ಅನೇಕ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವರೆಲ್ಲರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಗುರುಪ್ರೀತ್ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದು ತಪ್ಪು ಎಂದು ಅನೇಕ ಜನರು ನನಗೆ ಹೇಳಿದ್ದಾರೆ. ಅವರು ಜನರಿಗಾಗಿ ಏನನ್ನೂ ಮಾಡಿರಲಿಲ್ಲ. ಈಗ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಅಣ್ಣನೊಂದಿಗೆ ಮಾತನಾಡಿ ನನ್ನ ನಿರ್ಧಾರ ವಿವರಿಸುತ್ತೇನೆ' ಎಂದು ತಿಳಿಸಿದ್ದಾರೆ.