
ದುರ್ವಿಧಿ ಅಟ್ಟಹಾಸ ಮೆರೆಯದೇ ಇದ್ದಿದ್ದರೆ.. ನವೆಂಬರ್ 1, 2021 ರಂದು ‘ಕನ್ನಡ ರಾಜ್ಯೋತ್ಸವ’ದ ಪ್ರಯುಕ್ತ ಸಿದ್ಧಪಡಿಸಿದ್ದ ಕರ್ನಾಟಕದ ಕುರಿತಾದ ಡಾಕ್ಯುಮೆಂಟರಿ ಬಿಡುಗಡೆಯಾಗಬೇಕಿತ್ತು. ಇದೇ ವಿಚಾರದ ಕುರಿತಾಗಿ ಅಕ್ಟೋಬರ್ 27 ರಂದು ಫೇಸ್ಬುಕ್ನಲ್ಲಿ ಪುನೀತ್ ರಾಜ್ಕುಮಾರ್ ಸುಳಿವು ನೀಡಿದ್ದರು. ಆದರೆ, ಅಕ್ಟೋಬರ್ 29 ರಂದು ಯಾರೂ ನಿರೀಕ್ಷಿಸದ ದುರ್ಘಟನೆ ನಡೆಯದೇ ಹೋಯ್ತು. ಅಕ್ಟೋಬರ್ 29 ರಂದು ಪುನೀತ್ ರಾಜ್ಕುಮಾರ್ ಹಠಾತ್ ನಿಧನರಾದರು.
ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ನವೆಂಬರ್ 1 ರಂದು ಬಿಡುಗಡೆಯಾಗಬೇಕಿದ್ದ ಕರ್ನಾಟಕದ ಕುರಿತಾದ ಡಾಕ್ಯುಮೆಂಟರಿ ರಿಲೀಸ್ ಆಗಲಿಲ್ಲ. ಇದೀಗ ಇದೇ ಡಾಕ್ಯುಮೆಂಟರಿ ಕುರಿತಾಗಿ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ತಮ್ಮ ಫೇಸ್ಬುಕ್ ಪುಟದಲ್ಲಿ ಬಹುಮುಖ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಫೇಸ್ಬುಕ್ ಪೋಸ್ಟ್
‘’ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ. ಅಪ್ಪು ಅವರ ಕನಸಿನ ಪ್ರಾಜೆಕ್ಟ್ನ ಟೈಟಲ್ ಟೀಸರ್ ಡಿಸೆಂಬರ್ 6 ರಂದು ಪಿಆರ್ಕೆ ಆಡಿಯೋದಲ್ಲಿ ಬಿಡುಗಡೆಯಾಗಲಿದೆ’’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದ ಬಗ್ಗೆ ಡಾಕ್ಯುಮೆಂಟರಿ
ರಾಜ್ಯದ ವನ್ಯ ಸಂಪತ್ತು, ಸಮುದ್ರ ಜೀವಿಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ಜೊತೆ ಸೇರಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿದ್ಧಪಡಿಸಿದ್ದರು. ಈ ಡಾಕ್ಯುಮೆಂಟರಿಗೆ ‘ಗಂಧದ ಗುಡಿ’ ಅಂತ ಹೆಸರಿಡಲು ಪುನೀತ್ ರಾಜ್ಕುಮಾರ್ ಮನಸ್ಸು ಮಾಡಿದ್ದರು. 90 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಪುನೀತ್ ರಾಜ್ಕುಮಾರ್ ಕಾಡು ಸುತ್ತಿದ್ದರು, ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಕೂಡ ಮಾಡಿದ್ದರು.
ಅಕ್ಟೋಬರ್ 28 ರಂದು ಪುನೀತ್ ರಾಜ್ಕುಮಾರ್ ಹಾಕಿದ್ದ ಪೋಸ್ಟ್
‘’ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’’ ಎಂದು ಅಕ್ಟೋಬರ್ 27 ರಂದು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್ಕುಮಾರ್ ಪೋಸ್ಟ್ ಹಾಕಿದ್ದರು.
ಅಪ್ಪು ಕನಸನು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ
ಪುನೀತ್ ರಾಜ್ಕುಮಾರ್ ದೈಹಿಕವಾಗಿ ಜೊತೆಯಲ್ಲಿ ಇಲ್ಲದೇ ಇದ್ದರೂ, ಅವರ ಸ್ಫೂರ್ತಿಯೊಂದಿಗೆ, ಅಪ್ಪು ಕಂಡಿದ್ದ ಕನಸನ್ನು ನನಸಾಗಿಸಲು ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಹೊತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಇದೀಗ ಸಾಮಾಜಿಕ ಜಾಲತಾಣಕ್ಕೂ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಅಪ್ಪು ಕನಸನ್ನು ನನಸಾಗಿಸುವ ಹಾದಿಯಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಲ್ಪವಿರಾಮವಷ್ಟೇ…
‘’ಅಪ್ಪು ಅವರ ಕನಸೊಂದು ನವೆಂಬರ್ 1, 2021 ರಂದು ಬೆಳಕು ಕಾಣಬೇಕಿತ್ತು. ಆದರೆ, ಆ ಕನಸಿಗಿದು ಅಲ್ಪವಿರಾಮವಷ್ಟೇ… ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’’ ಎಂದು ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.