
ಕೊರೊನಾ ಸೋಂಕಿತರಿಗೆ ನೆರವಾಗಲು ಸಿನಿಮಾರಂಗದ ನಟ-ನಟಿಯರು ಮುಂದಾಗುತ್ತಿದ್ದಾರೆ. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅನೇಕರು ದೇಣಿಗೆ ನೀಡಿದ್ದಾರೆ. ಈಗ 'ಮೆಗಾ ಸ್ಟಾರ್' ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಪುತ್ರ ರಾಮ್ ಚರಣ್ ಕೂಡ ಕೈಜೋಡಿಸಿದ್ದಾರೆ.
ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಿದ ಚಿರು
ಕೊರೊನಾ ಸೋಂಕಿತರಿಗೆ ಮುಖ್ಯವಾಗಿ ಎದುರಾಗುತ್ತಿರುವ ಸಮಸ್ಯೆ ಎಂದರೆ, ಅದು ಆಕ್ಸಿಜನ್ ಕೊರತೆಯದ್ದು. ದೇಶಾದ್ಯಂತ ಆಕ್ಸಿಜನ್ ಕೊರತೆ ಉಂಟಾಗಿ, ಅದರಿಂದಲೇ ಎಷ್ಟೋ ಜನ ರೋಗಿಗಳು ಪ್ರಾಣ ಕಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಇದೀಗ ಆಂಧ್ರ ಪ್ರದೇಶದ ಮತ್ತು ತೆಲಂಗಾಣದ ಕೊರೊನಾ ರೋಗಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಚಿರು ಇಂಥದ್ದೊಂದು ಯೋಜನೆ ಆರಂಭಿಸಿದ್ದಾರೆ. ಆಕ್ಸಿಜನ್ ಪ್ಲಾಂಟ್ಸ್ ಸ್ಥಾಪಿಸುವ ಮೂಲಕ ರೋಗಿಗಳಿಗೆ ನೆರವಾಗಿದ್ದಾರೆ.
'ಈ ಎಲ್ಲ ವ್ಯವಸ್ಥೆಗಳ ಬಗ್ಗೆ ರಾಮ್ ಚರಣ್ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ನಮ್ಮ ಸಂಸ್ಥೆಯ ಕಣ್ಣು ಮತ್ತು ರಕ್ತ ನಿಧಿಗಳನ್ನೂ ಕೂಡ ಅವರೇ ನೋಡಿಕೊಳ್ಳುತ್ತಿದ್ದಾರೆ. ಆಕ್ಸಿಜನ್ ಸಿಲಿಂಡರ್ಗಳನ್ನು ಅಗತ್ಯ ಕ್ಕಂತೆ ವಿಲೇವಾರಿ ಮಾಡುವುದರ ಕುರಿತು ರಾಮ್ ಚರಣ್ ಉಸ್ತುವಾರಿ ವಹಿಸಿದ್ದಾರೆ' ಎಂದು ಚಿರಂಜೀವಿ ಹೇಳಿದ್ದಾರೆ. ಶೀಘ್ರದಲ್ಲೇ ಅನಂತಪುರ, ಗುಂಟೂರು, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಆಕ್ಸಿಜನ್ ಸಿಲಿಂಡರ್ಗಳು ಲಭ್ಯವಾಗಲಿದೆ. ತೆಲಂಗಾಣದ ಖಮ್ಮಂ, ಕರೀಮ್ನಗರಗಳಲ್ಲೂ ಈ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡಿವೆ. 'ಆಕ್ಸಿಜನ್ ಸಮಸ್ಯೆಯಿಂದ ಯಾವೊಬ್ಬ ರೋಗಿಯೂ ನಿಧನರಾಗಬಾರದು ಎಂದು ಉದ್ದೇಶ ನಮ್ಮದಾಗಿದೆ' ಎಂದು ಚಿರಂಜೀವಿ ತಿಳಿಸಿದ್ದಾರೆ.
ಕೊರೊನಾ ಮೊದಲ ಅಲೆ ಬಂದಾಗಲೂ ಚಿರು ಇಷ್ಟೇ ಮುತುವರ್ಜಿ ವಹಿಸಿ, ಕೆಲಸ ಮಾಡಿದ್ದರು. ಒಂದು ಚಾರಿಟೇಬಲ್ ಟ್ರಸ್ಟ್ ಆರಂಭಿಸಿ, ತೆಲುಗು ಚಿತ್ರರಂಗ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಈಗ ಆಕ್ಸಿಜನ್ ಬ್ಯಾಂಕ್ ಸ್ಥಾಪನೆ ಮಾಡಿ ಗಮನಸೆಳೆದಿದ್ದಾರೆ.