ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಮಂಜೂರು ;

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಉದ್ಯಮಿ ರಾಜ್‌ ಕುಂದ್ರಾಗೆ ಜಾಮೀನು ಸಿಕ್ಕಿದೆ

ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಮಂಜೂರು ;
Linkup

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಉದ್ಯಮಿ ರಾಜ್‌ ಕುಂದ್ರಾಗೆ ಜಾಮೀನು ಸಿಕ್ಕಿದೆ. ಇಂದು (ಸೆಪ್ಟೆಂಬರ್ 20) ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ರಯಾನ್ ಥಾರ್ಪ್‌ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿಗಳ ಶ್ಯೂರಿಟಿ ಮೇರೆಗೆ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ. 

'ಬಲಿಪಶು' ಮಾಡಲಾಗುತ್ತಿದೆ ಎಂದಿದ್ದ ರಾಜ್ ಕುಂದ್ರಾ 

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ತಮ್ಮನ್ನು 'ಬಲಿಪಶು' ಮಾಡಲಾಗುತ್ತಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯ ಸಪ್ಲಿಮೆಂಟರಿ ಚಾರ್ಜ್‌ಶೀಟ್‌ನಲ್ಲಿಲ್ಲ ಎಂದು ಜಾಮೀನಿಗೆ ಮನವಿ ಮಾಡಿ ಸೆಪ್ಟೆಂಬರ್ 18 ರಂದು ನ್ಯಾಯಾಲಯಕ್ಕೆ ರಾಜ್ ಕುಂದ್ರಾ ಅರ್ಜಿ ಸಲ್ಲಿಸಿದ್ದರು. ಪರಿಣಾಮ ಇವತ್ತು ರಾಜ್ ಕುಂದ್ರಾಗೆ ಜಾಮೀನು ಸಿಕ್ಕಿದೆ. 

ಇತ್ತೀಚೆಗಷ್ಟೇ ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಿದ್ದ ಪೊಲೀಸರು 

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಇತ್ತೀಚೆಗೆಷ್ಟೇ ಸಪ್ಲಿಮೆಂಟರಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬರೋಬ್ಬರಿ 1500 ಪುಟಗಳುಳ್ಳ ಆರೋಪಪಟ್ಟಿಯನ್ನು ಮುಂಬೈ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದರು. ಇದಾದ ಬಳಿಕ ಪ್ರಕರಣದ ತನಿಖೆ ಮುಗಿದಿದೆ ಎಂದು ಜಾಮೀನಿಗಾಗಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ರಾಜ್ ಕುಂದ್ರಾ ಅರ್ಜಿ ಸಲ್ಲಿಸಿದ್ದರು. 

ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ಏನಿದೆ? 

ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಕೇಸ್‌ಗೆ ಸಂಬಂಧಿಸಿದಂತೆ ಜುಲೈ 19 ರಂದು ಬಂಧಿಸಲಾಗಿತ್ತು. 

ಮುಂಬೈ ಪೊಲೀಸರ ಪ್ರಕಾರ, ಹಾಟ್ ಶಾಟ್ಸ್ ಆಪ್‌ಅನ್ನು ಆರೋಪಿಗಳು ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಹಾಗೂ ಸ್ಟ್ರೀಮಿಂಗ್ ಮಾಡಲು ಬಳಸುತ್ತಿದ್ದರು. ಆದರೆ, ವಕೀಲ ಪ್ರಶಾಂತ್ ಪಾಟೀಲ್ ಮೂಲಕ ಸಲ್ಲಿಸಲಾದ ತಮ್ಮ ಜಾಮೀನು ಅರ್ಜಿಯಲ್ಲಿ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ರಾಜ್ ಕುಂದ್ರಾ ತಿಳಿಸಿದ್ದರು. 

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ. ಎಫ್‌ಐಆರ್‌ನಲ್ಲಿ ರಾಜ್ ಕುಂದ್ರಾ ಹೆಸರಿಲ್ಲ. ಈ ಪ್ರಕರಣದಲ್ಲಿ ಸಿಲುಕಿಸಿ ರಾಜ್ ಕುಂದ್ರಾ ಅವರನ್ನು ಬಲಿಪಶು ಮಾಡಲಾಗಿದೆ ಎಂದೂ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೇ, ರಾಜ್ ಕುಂದ್ರಾ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಈವರೆಗಿನ ತನಿಖೆ ಮೂಲಕ ತಿಳಿದುಬಂದಿದೆ. ಅಶ್ಲೀಲ ಚಿತ್ರಗಳ ಅಪ್‌ಲೋಡ್ ಮಾಡುವ ಅಥವಾ ಪ್ರಸಾರ ಮಾಡುವ ಪ್ರಕ್ರಿಯೆಗೂ ರಾಜ್ ಕುಂದ್ರಾಗೂ ಸಂಬಂಧವಿಲ್ಲ ಎಂಬುದನ್ನೂ ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.